ಸುದ್ದಿಬಿಂದು ಬ್ಯೂರೋ
ಕುಮಟಾ : ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಇದನ್ನೇ ಅಸ್ತ್ರ ಮಾಡಿಕೊಂಡ ಕುಮಟಾ ಬಿಜೆಪಿಯ ಪುರಪಿತೃರು ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕೊಡಿಸುತ್ತೇನೆಂದು ಕೋಟ್ಯಾಂತರ ರೂಪಾಯಿ ಟೋಪಿ ಹಾಕಿದ ಘಟನೆ ನಡೆದಿದ್ದು, ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಕುಮಟಾ ಗ್ರಾಮಾಂತರ ಭಾಗದ ವ್ಯಕ್ತಿಯೊಬ್ಬ ಸಚಿವರೊಬ್ಬರ ಆಪ್ತನೆಂದು ಅವರ ಜೊತೆ ಫೋಟೋ ಕೂಡ ತೆಗಿಸಿಕೊಂಡು ಇದನ್ನೇ ಪುರಾವೆ ಎಂದು ಬಿಂಬಿಸಿಕೊಳ್ಳುತ್ತಾ ಗೋಕರ್ಣದ ಮಹಿಳೆಯನ್ನು ಮುಂದೆ ಮಾಡಿ ಅವಳಿಂದಲೇ ನಿರುದ್ಯೋಗಿ ಯುವಕ, ಯುವತಿಯರಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಇದಕ್ಕೆ ಕುಮಟಾ ಪುರಸಭೆಯ ಅನೇಕ ಸದಸ್ಯರು ಸಾಥ್ ನೀಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಪುರಸಭಾ ಸದಸ್ಯರು ಜವಾಬ್ದಾರಿಯಿಂದ ಊರ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಡಿಜಿಟಲ್ ಯುಗದಲ್ಲಿ ಉದ್ಯೋಗ ಕೊಡಿಸುವ ಕೆಲಸ ಆಗುವುದಿಲ್ಲ ಎಂದು ಗೊತ್ತಿದ್ದರೂ ನಿರುದ್ಯೋಗಿಗಳಿಂದ 2, 3, 5 ಲಕ್ಷದವರೆಗೂ ಹಣ ಪಡೆದಿರುವುದು ಇದೀಗ ಬಯಲಾಗಿದೆ.
ಕೆಲ ದಿನಗಳ ಹಿಂದೆಯೇ ಕುಮಟಾ ಪೊಲೀಸರು ಹಣ ಪಡೆದ ಆರೋಪಿಗಳನ್ನು ಬೆಂಗಳೂರಿನಿಂದ ಬಂಧಿಸಿ ಕುಮಟಾಕ್ಕೆ ಕರೆತಂದ ನಂತರ ಕೋರ್ಟ್ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದು, ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಈ ಆರೋಪಿಗಳು ವಿಚಾರಣೆ ವೇಳೆ ಪುರಸಭಾ ಸದಸ್ಯರ ಹೆಸರು ಹೇಳಿದ್ದು, ಉದ್ದೇಶ ಪೂರ್ವಕವಾಗಿ ಈ ಪ್ರಕರಣವನ್ನು ಮುಚ್ಚಿಡಲಾಗಿದೆ ಎನ್ನಲಾಗುತ್ತಿದೆ. ಇದೀಗ ಹಣ ನೀಡಿದ ಕೆಲ ನಿರುದ್ಯೋಗಿ ಯುವಕರೇ ಈ ಬಗ್ಗೆ ಬಾಯಿ ಬಿಟ್ಟಿದ್ದು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.