ಸುದ್ದಿಬಿಂದು ಬ್ಯೂರೋ
ಹೊನ್ನಾವರ: ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿ ವ್ಯಕ್ತಿಯೋರ್ವ ಲಾರಿ ಹಾಯಿಸಿ ಕೊಲೆಮಾಡಲು ಹೋಗಿ ಅಮಾಯಕ ಆಟೋ ಚಾಲಕನ ಮೇಲೆ ಲಾರಿ ಹಾಯಿಸಿ ಕೊಲೆಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿಯ ಜನತಾ ಕಾಲೋನಿ ಸಮೀಪ ನಡೆದಿದೆ..

ಅರೇಅಂಗಡಿಯ ಜನತಾ ಪ್ಲಾಟ್ ನಿವಾಸಿ ಓಲ್ವಿನ್ ರವಿ ಲೋಬೋ (31) ಕೊಲೆಯಾದ ದುರ್ಧೈವಿ.ವಿನಾಯಕ ನಾರಾಯಣ ಭಟ್ಟ ಕೊಲೆಗೈದ ಆರೋಪಿಯಾಗಿದ್ದಾನೆ. ನ.28 ರಂದು ಆರೊಳ್ಳಿಯ ಸೈಕಲ್ ಅಂಗಡಿ ಸಮೀಪ ಆರೋಪಿ ವಿನಾಯಕ ಭಟ್ಟ ಈತನು ಹೊಸಾಕುಳಿಯ ವಸಂತ ನಾಯ್ಕ ಈತನ ಗೆಳೆಯನಾದ ಸಾಲ್ಕೋಡದ ಜನಾರ್ಧನ ನಾಯ್ಕ ಈತನೊಂದಿಗೆ ಹಣದ ವ್ಯವಹಾರದ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದ.
ಅದೇ ವಿಷಯಕ್ಕೆ ಧ್ವೇಷದಿಂದ ಇದ್ದ ವಿನಾಯಕ ಭಟ್ಟ ನ.28ರ ಮಂಗಳವಾರ ತಡರಾತ್ರಿ ಅರೇಅಂಗಡಿಯ ಜನತಾ ಕಾಲೋನಿ ಸಮೀಪ ವಸಂತ ನಾಯ್ಕ ಹಾಗೂ ಜನಾರ್ಧನ ನಾಯ್ಕ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಅರೇಅಂಗಡಿ ಕಡೆಯಿಂದ ಕೆಂಪು ಬಣ್ಣದ ಟಿಪ್ಪರ್ ಲಾರಿ ಚಲಾಯಿಸಿಕೊಂಡು ಬರುತ್ತಿರುವಾಗ ಆಟೋ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದ ವಸಂತ ನಾಯ್ಕ, ಜನಾರ್ಧನ ನಾಯ್ಕ ಅವರುನ್ನು ಕೊಲೆ ಮಾಡಲು ಮುಂದಾಗಿದ್ದಾನೆ.
ಈ ವೇಳೆ ಆಟೋದಲ್ಲಿ ಕುಳಿತಿದ್ದ ಓಲ್ವಿನ್ ರವಿ ಲೋಬೋ ಇವರ ಮೇಲೆ ಟಿಪ್ಪರ್ ಹಾಯಿಸಿ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಓಲ್ವಿನ್ ರವಿ ಲೋಬೋ ಅವರ ತಲೆಗೆ ಗಂಭೀರ ಗಾಯಪಡಿಸಿ ಕೊಲೆಮಾಡಿದ್ದಲ್ಲದೇ ವಸಂತ ನಾಯ್ಕ ಹಾಗೂ ಜನಾರ್ಧನ ನಾಯ್ಕ ಅವರಿಗೆ ಕೊಲೆ ಮಾಡುವ ಉದ್ದೇಶದಿಂದ ವಸಂತ ನಾಯ್ಕ ಅವರ ಎರಡು ಕಾಲುಗಳಿಗೆ ಗಾಯನೋವುಪಡಿಸಿದ್ದಾನೆ. ಇನ್ನೋರ್ವ ಜನಾರ್ಧನ ನಾಯ್ಕ ಈತನಿಗೆ ತಲೆಗೆ ಹಾಗೂ ಎಡಕಾಲಿಗೆ ಗಂಭೀರ ಗಾಯನೋವುಪಡಿಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ವಸಂತ ನಾಯ್ಕ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.