ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಅಬಕಾರಿ ಇಲಾಖೆಯ ಗ್ರೂಪ್ ‘ಸಿ’ ವೃಂದದ ಸಿಬ್ಬಂದಿಗಳ ವರ್ಗಾವಣೆಗೆ 2025ರಲ್ಲಿ ಜಾರಿಗೆ ತರಲಾಗಿರುವ ಪಾರದರ್ಶಕ ಕೌನ್ಸಿಲಿಂಗ್ ಆಧಾರಿತ ವರ್ಗಾವಣೆ ಪದ್ಧತಿಯನ್ನೇ ಮುಂದುವರಿಸುವಂತೆ ಕರ್ನಾಟಕ ರಾಜ್ಯ ಅಬಕಾರಿ ನಿರೀಕ್ಷಕರ ಸಂಘ ಅಬಕಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸಂಘದ ಪದಾಧಿಕಾರಿಗಳು, 2025ರಲ್ಲಿ ಜಾರಿಗೆ ಬಂದ ಕೌನ್ಸಿಲಿಂಗ್ ಆಧಾರಿತ ವರ್ಗಾವಣೆ ವ್ಯವಸ್ಥೆಯು ಸಿಬ್ಬಂದಿಗಳ ಜೇಷ್ಠತೆ ಹಾಗೂ ಕಾರ್ಯಕ್ಷಮತೆಗೆ ಸೂಕ್ತ ಮಾನ್ಯತೆ ನೀಡುವ ಜೊತೆಗೆ ಪಾರದರ್ಶಕವಾಗಿ ಜಾರಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಂದಿನ ವರ್ಗಾವಣೆ ಪದ್ಧತಿಯಲ್ಲಿ ಉಂಟಾಗುತ್ತಿದ್ದ ಅನಿಶ್ಚಿತತೆ, ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರದಂತಹ ಅಂಶಗಳಿಗೆ ಕೌನ್ಸಿಲಿಂಗ್ ವ್ಯವಸ್ಥೆ ಕಡಿವಾಣ ಹಾಕಿದೆ. ಪ್ರತಿಯೊಬ್ಬ ಸಿಬ್ಬಂದಿಗೂ ತಮ್ಮ ಅರ್ಹತೆ ಮತ್ತು ಜೇಷ್ಠತೆಯ ಆಧಾರದ ಮೇಲೆ ತಮಗೆ ಅನುಕೂಲಕರವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ನ್ಯಾಯಯುತ ಅವಕಾಶ ದೊರೆಯುತ್ತಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಯುತ್ತಿರುವುದರಿಂದ ಸಿಬ್ಬಂದಿಗಳಲ್ಲಿ ಮಾನಸಿಕ ನೆಮ್ಮದಿ ಹೆಚ್ಚಿದ್ದು, ಕರ್ತವ್ಯ ಪ್ರಜ್ಞೆ ಹಾಗೂ ಕೆಲಸದ ಮೇಲಿನ ಆಸಕ್ತಿ ವೃದ್ಧಿಯಾಗಿದೆ. ಅನಗತ್ಯ ಒತ್ತಡಗಳಿಂದ ಮುಕ್ತರಾಗಿರುವ ಸಿಬ್ಬಂದಿ ಇಲಾಖೆಯ ಕಾರ್ಯಚಟುವಟಿಕೆಗಳು ಹಾಗೂ ಸರ್ಕಾರದ ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿದೆ ಎಂದು ಮನವಿ ಮೂಲಕ ತಿಳಿಸಲಾಗಿದೆ.
ಹಿಂದಿನ ಪದ್ಧತಿ ಜಾರಿಗೆ ಆತಂಕ
ಸರ್ಕಾರ ಮತ್ತೆ ಹಳೆಯ ವರ್ಗಾವಣೆ ಪದ್ಧತಿಯನ್ನು ಜಾರಿಗೆ ತರಲು ಪರಿಶೀಲಿಸುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಲ್ಲಿ ಆತಂಕ ಉಂಟಾಗಿದೆ ಎಂದು ಸಂಘ ಹೇಳಿದೆ. ಹಳೆಯ ವ್ಯವಸ್ಥೆ ಮತ್ತೆ ಜಾರಿಗೆ ಬಂದರೆ ಸಿಬ್ಬಂದಿಗಳ ದಕ್ಷತೆ ಹಾಗೂ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.
ಇದೇ ವೇಳೆ, 2025ರ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆ ಮಾರ್ಗಸೂಚಿಗಳಲ್ಲಿರುವ ಸ್ವಂತ ಜಿಲ್ಲೆಗೆ ವರ್ಗಾವಣೆ ಹಾಗೂ ಲೋಕಾಯುಕ್ತ ದೂರು ಮತ್ತು ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾವಣೆ ಮಾಡುವಂತಹ ಅಂಶಗಳನ್ನು ಸರ್ಕಾರ ಪುನರ್ ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಬೇಕು ಒತ್ತಾಯಿಸಿದೆ.
ಸಿಬ್ಬಂದಿಗಳ ಹಿತದೃಷ್ಟಿ ಹಾಗೂ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, 2025ರಲ್ಲಿ ಜಾರಿಗೆ ತರಲಾದ ಕೌನ್ಸಿಲಿಂಗ್ ಆಧಾರಿತ ವರ್ಗಾವಣೆ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಅಬಕಾರಿ ನಿರೀಕ್ಷಕರ ಸಂಘ ಸರ್ಕಾರಕ್ಕೆ ಗೌರವಪೂರ್ವಕವಾಗಿ ಮನವಿ ಮಾಡಿದೆ.



