ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನದಿ ಪಾತ್ರಗಳು ಹಾಗೂ ಸಮುದ್ರದ ಅಳಿವೆ ಪ್ರದೇಶಗಳಲ್ಲಿ ಮೀನುಗಾರಿಕಾ ಬೋಟ್‌ಗಳು ಪದೇಪದೇ ಮುಳುಗಡೆಯಾಗುತ್ತಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಒಂದೆಡೆ ಬೋಟ್‌ ಅಪಘಾತಗಳು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಮೀನುಗಾರಿಕೆಗೆ ತೆರಳಿದ ಮೀನುಗಾರರು ನದಿಯಲ್ಲಿ ಮುಳುಗಿ ಅಪಾಯಕ್ಕೆ ಸಿಲುಕುತ್ತಿರುವ ಘಟನೆಗಳು ಮುಂದುವರಿದಿವೆ. ಇದರಿಂದ ಮೀನುಗಾರರ ಜೀವದ ಜತೆಗೆ ಅವರ ಜೀವನೋಪಾಯವೂ ಅಪಾಯದ ಅಂಚಿಗೆ ತಲುಪಿದೆ.

ಇತ್ತೀಚೆಗೆ ತದಡಿ ಹಾಗೂ ಕಾರವಾರ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಬೋಟ್‌ಗಳು ಮುಳುಗಡೆಯಾಗಿ ಪ್ರತ್ಯೇಕ ಘಟನೆಗಳಲ್ಲಿ ಸುಮಾರು 30 ಮೀನುಗಾರರನ್ನು ರಕ್ಷಿಸಲಾಗಿದೆ. ಬೋಟ್‌ಗಳ ಮುಳುಗಡೆಯಿಂದ ಮೀನುಗಾರರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದು, ನಿರಂತರ ಅಪಘಾತಗಳಿಂದ ಕರಾವಳಿ ಮೀನುಗಾರರು ಆತಂಕದಲ್ಲಿದ್ದಾರೆ.

ಸಚಿವರ ಭೇಟಿ ಯಾವಾಗ?

ಮೀನುಗಾರಿಕಾ ಬೋಟ್‌ಗಳು ಮುಳುಗಡೆಯಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ ರಾಜ್ಯದ ನೂತನ ಮೀನುಗಾರಿಕಾ ಸಚಿವರು ಕರಾವಳಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸದಿರುವ ಬಗ್ಗೆ ಮೀನುಗಾರ ಸಮುದಾಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಮೀನುಗಾರರನ್ನು ಭೇಟಿ ಮಾಡುವುದು, ಅವರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಯಬೇಕಿತ್ತು. ಆದರೆ ಈವರೆಗೆ ಸಚಿವರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂಬ ಆರೋಪ ಮೀನುಗಾರ ಮುಖಂಡರಿಂದ ಕೇಳಿಬಂದಿದೆ.

‘ಕರಾವಳಿಯನ್ನು ಮರೆತಂತಾಗಿದೆ’

ಬೋಟ್‌ ಅಪಘಾತಗಳಿಂದ ಮೀನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿರುವ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ. ಕರಾವಳಿಯ ಪ್ರಮುಖ ಮೀನುಗಾರಿಕಾ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳಲು ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕು. ಆದರೆ ಸಚಿವರ ಮೌನ ಹಾಗೂ ನಿರ್ಲಕ್ಷ್ಯದ ನಡೆ ಮೀನುಗಾರ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

ಮಂಕಾಳು ವೈದ್ಯರ ಕಾರ್ಯವೈಖರಿ ನೆನಪಿಸಿಕೊಳ್ಳುತ್ತಿರುವ ಮೀನುಗಾರರು

ಈ ಹಿಂದೆ ಮೀನುಗಾರಿಕಾ ಇಲಾಖೆ ಸಚಿವರಾಗಿದ್ದ ಮಂಕಾಳು ವೈದ್ಯ ಅವರು ಮೀನುಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಸಣ್ಣಪುಟ್ಟ ದುರಂತಗಳ ಸಂದರ್ಭದಲ್ಲೂ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮೂಲಕ ನೆರವು ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದರು ಎಂದು ಮೀನುಗಾರರು ನೆನಪಿಸಿಕೊಳ್ಳುತ್ತಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಘೋಷಣೆ ಮಾಡುವ ಮೂಲಕ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವಾಗಿದ್ದ ಕ್ರಮವನ್ನೂ ಮೀನುಗಾರರು ಸ್ಮರಿಸುತ್ತಿದ್ದಾರೆ. ಹೀಗಾಗಿ ಹಿಂದಿನ ಸಚಿವರ ಸ್ಪಂದನೆಗೆ ಹೋಲಿಸಿದರೆ, ಪ್ರಸ್ತುತ ಸಚಿವರ ಮೌನದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಮೀನುಗಾರರ ಪ್ರಮುಖ ಬೇಡಿಕೆಗಳು

  • ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ತಕ್ಷಣ ಸೂಕ್ತ ವಿಪತ್ತು ಪರಿಹಾರ ಬಿಡುಗಡೆ ಮಾಡಬೇಕು.
  • ನದಿ ಹಾಗೂ ಸಮುದ್ರದ ಅಳಿವೆಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ತುರ್ತಾಗಿ ಡ್ರೆಡ್ಜಿಂಗ್ ಕಾಮಗಾರಿ ಕೈಗೊಳ್ಳಬೇಕು.
  • ಅಪಾಯಕಾರಿ ಅಳಿವೆ ಪ್ರದೇಶಗಳನ್ನು ಗುರುತಿಸಿ ಶಾಶ್ವತ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು.
  • ಮೀನುಗಾರಿಕಾ ಸಚಿವರು ತಕ್ಷಣ ಕರಾವಳಿ ಜಿಲ್ಲೆಗೆ ಭೇಟಿ ನೀಡಿ ಮೀನುಗಾರರ ಕುಂದುಕೊರತೆ ಆಲಿಸಬೇಕು.
  • ಬೋಟ್‌ ಅಪಘಾತಗಳನ್ನು ತಡೆಗಟ್ಟಲು ಮೀನುಗಾರಿಕಾ ಇಲಾಖೆ ವಿಶೇಷ ಸುರಕ್ಷತಾ ಯೋಜನೆ ರೂಪಿಸಬೇಕು.

ಇದನ್ನೂ ಓದಿ /ಶಿಕ್ಷಕರೇ ವಿದ್ಯಾರ್ಥಿಗಳಿಗೆ ಪಾಠ ಹೇಳಿ… ಅವರ ಜೀವದ ಜೊತೆ ಚೆಲ್ಲಾಟವಾಡಬೇಡಿ!”