ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ರೌಡಿಶೀಟರ್‌ಗಳ ನಡುವಿನ ಜಗಳ ಬಿಡಿಸಲು ಹೋಗಿದ್ದ ಇಬ್ಬರು ಪೊಲೀಸರ ಮೇಲೆಯೇ ರೌಡಿಗಳು ಚಾಕು ಇಸರ್ ಇರಿತ ಮಾಡಿರುಚ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ತಡರಾತ್ರಿ ನಡೆದಿದೆ.

ಚಾಕು ಇರಿತಕ್ಕೊಳಗಾದವರನ್ನು ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ರೌಡಿಶೀಟರ್ ರಾಜು ಹಾಗೂ ಆತನ ಗುಂಪು ಮನೋಜ್ ಎಂಬಾತನೊಂದಿಗೆ ಜಗಳವಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ, ಜಗಳ ಬಿಡಿಸಲು ಮುಂದಾಗಿದ್ದಾರೆ.

ಈ ವೇಳೆ ಜಗಳ ಬಿಡಿಸಲು ಬಂದ ಪೊಲೀಸರ ಮೇಲೆಯೇ ರೌಡಿಶೀಟರ್ ರಾಜು ಹಾಗೂ ಆತನ ಗುಂಪು ಚಾಕುವಿನಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಯಲ್ಲಿ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಗಾಯಗೊಂಡಿದ್ದು, ಜಗಳದಲ್ಲಿ ಭಾಗಿಯಾಗಿದ್ದ ಮನೋಜ್ ಎಂಬಾತನಿಗೂ ಚಾಕು ಇರಿತವಾಗಿದೆ. ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.