ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ಭಾರತೀಯ ನೌಕಾಪಡೆಯ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಇಂದು ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿತ ಅತ್ಯಾಧುನಿಕ ‘ಮಾಲ್ವಾಣ್’ ಯುದ್ಧನೌಕೆಯನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುತ್ತಿದೆ.

ಕೇರಳದ ಕೊಚ್ಚಿಯ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡಿರುವ ಈ ಯುದ್ಧನೌಕೆ ಸುಮಾರು 80 ಶೇಕಡಾ ಸ್ವದೇಶಿ ತಂತ್ರಜ್ಞಾನವನ್ನು ಒಳಗೊಂಡಿದ್ದು, ದೇಶದ ಆತ್ಮನಿರ್ಭರ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
ಈ ಯುದ್ಧನೌಕೆ 78 ಮೀಟರ್ ಉದ್ದ, 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳ ಹೊಂದಿದ್ದು, ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ನೌಕೆಯಲ್ಲಿ 7 ಅಧಿಕಾರಿಗಳು ಹಾಗೂ 57 ನಾವಿಕರು (ಸೇಲರ್‌ಗಳು) ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
‘ಮಾಲ್ವಾಣ್’ ಯುದ್ಧನೌಕೆ ಸಮುದ್ರದ ಆಳದಲ್ಲಿ ಕಾರ್ಯನಿರ್ವಹಿಸುವ ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ಅವುಗಳ ವಿರುದ್ಧ ದಾಳಿ ನಡೆಸುವ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಹೊಂದಿದೆ. ಜೊತೆಗೆ ಸಮುದ್ರದ ಮೇಲಿನ ಸಮರ ಹಾಗೂ ಆತ್ಮರಕ್ಷಣೆಗೆ 30 ಮಿ.ಮೀ ನೇವಲ್ ಸರ್ಫೇಸ್ ಗನ್ ಅಳವಡಿಸಲಾಗಿದೆ.

ಹಡಗಿನ ತಳಭಾಗದಲ್ಲಿ ‘ಅಭಯ್ ಸೋನಾರ್’ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಸಮುದ್ರದಲ್ಲಿ ಧ್ವನಿ ತರಂಗಗಳನ್ನು ಪ್ರಸಾರ ಮಾಡುವ ಮೂಲಕ ಜಲಾಂತರ್ಗಾಮಿಗಳ ಇರುವಿಕೆಯನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಈ ನೌಕೆಗೆ ಇದೆ. ಇದರಿಂದ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗೆ ಮತ್ತಷ್ಟು ಬಲ ಸಿಗಲಿದೆ.

ಈ ಯುದ್ಧನೌಕೆಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಸಮುದ್ರ ಭದ್ರತಾ ಸಾಮರ್ಥ್ಯ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದ್ದು, ಕಾರವಾರದ ಐಎನ್‌ಎಸ್ ಕದಂಬ ಮತ್ತೊಮ್ಮೆ ಮಹತ್ವದ ರಕ್ಷಣಾ ಸಾಧನೆಗೆ ಸಾಕ್ಷಿಯಾಗಿದೆ.