ಸುದ್ದಿಬಿಂದು ಬ್ಯೂರೋ ವರದಿ
ಹದಿನೈದು ದಿನಗಳ ಹಿಂದೆಯಷ್ಟೇ ಹೊಸ ಜೀವನದ ನೂರಾರು ಕನಸುಗಳನ್ನು ಹೊತ್ತು ಆ ಜೋಡಿ ಹಸೆಮಣೆ ಏರಿತ್ತು. ಪರಸ್ಪರ ಕೈಹಿಡಿದು ನೂರಾರು ವರ್ಷ ಜೊತೆಯಾಗಿ ಬಾಳಬೇಕಾಗಿದ್ದ ನವ ದಂಪತಿಗಳ ಬಾಳಲ್ಲಿ ವಿಧಿ ಹೆಣೆದಿದ್ದ ಆಟವೇ ಬೇರೆಯಾಗಿತ್ತು. ಮದುವೆಯಾಗಿ ಕೇವಲ 15 ದಿನ ಕಳೆಯುವಷ್ಟರಲ್ಲೇ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿ ನವವಧುವಿನ ಜೀವವನ್ನು ಬಲಿಪಡೆದಿದೆ.
ನಡೆದಿದ್ದೇನು?
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮೂಕನಹುಂಡಿ ಗ್ರಾಮದ ನಿವಾಸಿಯಾಗಿದ್ದ 20 ವರ್ಷದ ಮೇಘನಾ ಎಂಬಾಕೆಯನ್ನು, ಬಿದರಗೂಡು ಗ್ರಾಮದ ಪುನೀತ್ ಎಂಬುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಹೊಸ ಸಂಸಾರದ ನೂತನ ಕನಸುಗಳೊಂದಿಗೆ ಈ ದಂಪತಿ ಇಂದು ಮೈಸೂರಿನ ಆರ್.ಟಿ.ನಗರದ ಬಳಿ ಬೈಕ್ನಲ್ಲಿ ಚಲಿಸುತ್ತಿದ್ದರು. ಆದರೆ, ವಿಧಿಯ ರೂಪದಲ್ಲಿ ಬಂದ ಯಮ ಇವರ ಪಾಲಿಗೆ ಕಂಟಕನಾಗಿದ್ದಾನೆ.
ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ದಿಢೀರ್ ಸ್ಕಿಡ್ ಆಗಿದೆ. ಬೈಕ್ನಿಂದ ಕೆಳಗೆ ಬಿದ್ದ ತೀವ್ರತೆಗೆ ಹಿಂಬದಿಯಲ್ಲಿ ಕುಳಿತಿದ್ದ ಮೇಘನಾ ಅವರ ತಲೆ ನೇರವಾಗಿ ರಸ್ತೆಗೆ ಅಪ್ಪಳಿಸಿದೆ. ದುರದೃಷ್ಟವಶಾತ್ ಮೇಘನಾ ಅವರು ಹೆಲ್ಮೆಟ್ ಧರಿಸಿರಲಿಲ್ಲ. ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಮೇಘನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಪತಿ ಪುನೀತ್ ಅವರಿಗೂ ತಲೆ, ಕೈ ಹಾಗೂ ಕಾಲುಗಳ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ….
ಹದಿನೈದು ದಿನಗಳ ಹಿಂದಷ್ಟೇ ಮಗಳ ಮದುವೆ ಮಾಡಿ ಸಡಗರಪಟ್ಟಿದ್ದ ಹೆತ್ತ ಕರಳು ಇವತ್ತು ಮಗಳ ಶವ ನೋಡಿ ಕಣ್ಣೀರಿನ ಕಡಲಲ್ಲಿ ಮುಳುಗಿದೆ. ಅತ್ತ ಪತಿಯ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮವೇ ಈ ದುರಂತಕ್ಕೆ ಕಣ್ಣೀರು ಹಾಕುತ್ತಿದೆ.
ಒಂದು ಹೆಲ್ಮೆಟ್ ಧರಿಸಿದ್ದರೆ ಉಳಿಯುತ್ತಿತ್ತು ಜೀವ.!
ಈ ಭೀಕರ ದುರಂತಕ್ಕೆ ಹೆಲ್ಮೆಟ್ ಧರಿಸದೇ ಇದ್ದಿದ್ದೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಬೈಕ್ ಸ್ಕಿಡ್ ಆದಾಗ ಒಂದು ವೇಳೆ ಮೇಘನಾ ಅವರು ಹೆಲ್ಮೆಟ್ ಧರಿಸಿದ್ದರೆ, ಖಂಡಿತವಾಗಿಯೂ ತಲೆಗೆ ಇಷ್ಟು ಬಲವಾದ ಪೆಟ್ಟು ಬೀಳುತ್ತಿರಲಿಲ್ಲ ಮತ್ತು ಒಂದು ಅಮೂಲ್ಯ ಜೀವ ಉಳಿಯುತ್ತಿತ್ತು.
ಇದನ್ನೂ ಓದಿ / ಮದ್ಯದ ನಶೆಯಲ್ಲಿ ಕಾರ ಚಾಲಕನ ಹುಚ್ಚಾಟ; ಅಡ್ಡಾದಿಡ್ಡಿ ಕಾರ ಓಡಿಸಿ ಅಪಘಾತ

