ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಾಣಿಜ್ಯ ಬಂದರಿನಲ್ಲಿ ಬಿಟುಮಿನ್ ಸ್ಟೋರೇಜ್ ಟ್ಯಾಂಕ್‌ಗೆ ತುಂಬಿಸುವ ವೇಳೆ ಬಿಟುಮಿನ್ ಏಕಾಏಕಿ ಉಕ್ಕಿ ಹರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಘಟನೆ ವೇಳೆ ಸ್ಥಳದಲ್ಲಿ ಕಾರ್ಮಿಕರು ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಾರ್ಜಾದಿಂದ ಬಿಟುಮಿನ್ ಹೊತ್ತು ತಂದಿದ್ದ ಸ್ಯಾಪ್ಕೊ (SAPCO) ಕಂಪನಿಗೆ ಸೇರಿದ ಹಡಗು ಕಾರವಾರದ MMCL ಕಂಪನಿಗೆ ಬಿಟುಮಿನ್ ಪೂರೈಕೆ ಮಾಡುತ್ತಿತ್ತು. ಬಂದರಿನಲ್ಲಿರುವ ಸ್ಟೋರೇಜ್ ಟ್ಯಾಂಕ್‌ಗೆ ಬಿಟುಮಿನ್ ತುಂಬಿಸುವ ಮುನ್ನ ಅದನ್ನು ಬಿಸಿ (ಬಾಯ್ಲ್) ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿತ್ತು.ಈ ವೇಳೆ ಬಿಟುಮಿನ್ ಏಕಾಏಕಿ ಉಕ್ಕಿ ಹರಿದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣ ನುರಿತ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದ ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಬಳಿಕ ಬಿಟುಮಿನ್ ಅನ್ನು ಸುರಕ್ಷಿತವಾಗಿ ಸ್ಟೋರೇಜ್ ಟ್ಯಾಂಕ್‌ಗೆ ಸಂಗ್ರಹಿಸಲಾಗಿದ್ದು, ಸರಕು ಖಾಲಿ ಮಾಡಿದ ಹಡಗು ಶಾರ್ಜಾಗೆ ವಾಪಸ್ ತೆರಳಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭದ್ರತಾ ಕ್ರಮಗಳು ಹಾಗೂ ಘಟನೆಗೆ ಕಾರಣವಾದ ಅಂಶಗಳ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ/ಕುಮಟಾ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಶಾಸಕ ದಿನಕರ ಶೆಟ್ಟಿಗೆ ಮನವಿ