ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ನೋಂದಾಯಿತ ಸಿವಿಲ್ ಗುತ್ತಿಗೆದಾರರಿಂದ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಿ, ಸ್ಥಳೀಯ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವಂತೆ ಕ್ಷೇತ್ರದ ಶಾಸಕ ಅವರಿಗೆ ಕುಮಟಾ ತಾಲೂಕಿನ ನೋಂದಾಯಿತ ಸಿವಿಲ್ ಗುತ್ತಿಗೆದಾರರು ಮನವಿ ಸಲ್ಲಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಕೈಗೊಂಡ ಕಾಮಗಾರಿಗಳ ಬಿಲ್ಗಳೂ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಇದರಿಂದ ಸ್ಥಳೀಯ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ವೃತ್ತಿಯನ್ನು ಮುಂದುವರಿಸುವುದೇ ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಕುಮಟಾ ತಾಲೂಕಿನ ಗುತ್ತಿಗೆದಾರರು ಬೇರೆ ತಾಲೂಕುಗಳಲ್ಲಿ 50ಲಕ್ಷ ರೂ. ಒಳಗಿನ ಕಾಮಗಾರಿಗಳಿಗೆ ಟೆಂಡರ್ ಸಲ್ಲಿಸಿದರೆ, ಅಲ್ಲಿನ ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ಮೂಲಕ ಟೆಂಡರ್ ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ.ಆದರೆ ಕುಮಟಾ ತಾಲೂಕಿನಲ್ಲಿ ಮಾತ್ರ ಹೊರ ತಾಲೂಕಿನ ಗುತ್ತಿಗೆದಾರರು ಯಾವುದೇ ಅಡೆತಡೆ ಇಲ್ಲದೆ 50ಲಕ್ಷ ರೂ. ಒಳಗಿನ ಕಾಮಗಾರಿಗಳನ್ನು ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಅಸಮಾನ ಪರಿಸ್ಥಿತಿ ಮುಂದುವರಿದರೆ ಸ್ಥಳೀಯ ಸಣ್ಣ ಗುತ್ತಿಗೆದಾರರಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಸರ್ಕಾರದ ಅನೇಕ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿ, ನಿರ್ಮಿತಿ ಹಾಗೂ ಹೆಬಿಟೇಶನ್ ಸಂಸ್ಥೆಗಳಿಗೆ ನೀಡಲಾಗುತ್ತಿದ್ದು, ಈ ಸಂಸ್ಥೆಗಳು ಕಾಮಗಾರಿಗಳನ್ನು ಸ್ಥಳೀಯ ನೋಂದಾಯಿತ ಗುತ್ತಿಗೆದಾರರಿಗೆ ನೀಡದೆ, ಬೇರೆ ತಾಲೂಕು ಹಾಗೂ ಜಿಲ್ಲೆಗಳ ಅನಧಿಕೃತ ಗುತ್ತಿಗೆದಾರರಿಗೆ ವಹಿಸುತ್ತಿರುವುದರಿಂದ ಸ್ಥಳೀಯ ಗುತ್ತಿಗೆದಾರರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ದೂರಿದ್ದಾರೆ.
ಈ ವೇಳೆ ಸಿವಿಲ್ ಗುತ್ತಿಗೆದಾರರ ಜಿಲ್ಲಾಧ್ಯಕ್ಷ ಧೀರೂ ಶಾನಭಾಗ, ಕುಮಟಾ ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ತುಕರಾಮ ನಾಯ್ಕ, ಉಪಾಧ್ಯಕ್ಷರಾದ ಜಗನ್ನಾಥ ಕೊಚರೇಕರ್, ಪ್ರಶಾಂತ ನಾಯಕ, ಕಾರ್ಯದರ್ಶಿ ಸುದರ್ಶನ ಶಾನಭಾಗ, ಕೋಶಾಧ್ಯಕ್ಷ ದೀಪಕ ಗೌಡ ಸೇರಿದಂತೆ ನೂರಾರು ಗುತ್ತಿಗೆದಾರರು ಹಾಜರಿದ್ದರು.

