ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮದಿನದ ಅಂಗವಾಗಿ, ತಾಲೂಕಿನ ಕೋಳಿಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷರು ಹಾಗೂ ಟ್ರಸ್ಟ್ನ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆಯವರು ಕುಡಿಯುವ ನೀರಿನ ವಾಟರ್ ಫಿಲ್ಟರ್ ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, “ಅಭಿವೃದ್ಧಿ ಚಿಂತನೆಯುಳ್ಳ ನಮ್ಮ ಆತ್ಮೀಯ ಸಂಸದರಾದ ಕಾಗೇರಿಯವರ ಜನ್ಮದಿನದಂದು ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುತ್ತಿರುವುದು ನನಗೆ ಹೆಮ್ಮೆಯ ತಂದಿದೆ. ಭಗವಂತನು ಅವರಿಗೆ ಇನ್ನಷ್ಟು ಹೆಚ್ಚಿನ ಅಧಿಕಾರ ಹಾಗೂ ಆಯಸ್ಸು, ಆರೋಗ್ಯವನ್ನು ನೀಡಿ, ಜನಸೇವೆ ಮಾಡಲು ಶಕ್ತಿ ಕೊಡಲಿ. ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಶಾಲೆಗಳಿಗೆ ಹಾಗೂ ವಿವಿಧ ಕ್ಷೇತ್ರಗಳಿಗೆ ವಾಟರ್ ಫಿಲ್ಟರ್ಗಳನ್ನು ಕೊಡುಗೆಯಾಗಿ ನೀಡಿದ್ದೇವೆ. ಈ ಶಾಲೆಯ ಅಡುಗೆ ಕೋಣೆಯ ಕಟ್ಟಡಕ್ಕೆ ನಿರ್ಮಾಣಕ್ಕೆ ಹಣಕಾಸಿನ ಅವಶ್ಯಕತೆ ಇದ್ದು, ಅದರ ನಿರ್ಮಾಣಕ್ಕೆ ತಮ್ಮಿಂದಾಗುವ ಸಹಕಾರ ಸಹಕಾರ ನೀಡುವುದಾಗಿ ಹೇಳಿದರು. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದೇನೆ. ನಮ್ಮ ಜೀವನದಲ್ಲಿ ಅವಶ್ಯಕತೆ ಇರುವವರಿಗೆ ದಾನ ಮಾಡುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು. ಸನ್ಮಾನ ಮಾಡಿದಾಗ ನಾನು ಏನೋ ಸಾಧನೆ ಮಾಡಿದ್ದೇನೆ ಎಂದಲ್ಲ, ಬದಲಿಗೆ ನನ್ನ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ,” ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀನಿವಾಸ ಹೆಗಡೆ ಮಾತನಾಡಿ, “ನಾವು ಗಳಿಸುವ ಆಸ್ತಿ ಮತ್ತು ಹಣ ಶಾಶ್ವತವಲ್ಲ. ಆದರೆ, ನಾವು ಮಾಡುವ ಸಮಾಜ ಸೇವೆ ಹಾಗೂ ಹುಟ್ಟಿನಿಂದ ಸಾಯುವವರೆಗೆ ಮಾಡುವ ಸಾಧನೆಗಳು ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅನಂತಮೂರ್ತಿ ಹೆಗಡೆಯವರು ಕಷ್ಟ ಎಂದು ಬಂದವರಿಗೆ ತಮ್ಮಿಂದಾಗುವ ಸಹಾಯ, ಸಹಕಾರ ನೀಡಿದ್ದಾರೆ. ಈಗಾಗಲೇ ೧೫೦ಕ್ಕೂ ಹೆಚ್ಚು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ್ದು, ಈಗ ನಮ್ಮ ಕೋಳಿಗಾರ ಶಾಲೆಗೂ ಸಂಸದ ಕಾಗೇರಿಯವರ ಜನ್ಮದಿನದ ಅಂಗವಾಗಿ ಈ ಘಟಕವನ್ನು ಒದಗಿಸಿದ್ದಾರೆ ಎಂದರು.
ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದ ಅನಂತಮೂರ್ತಿ ಹೆಗಡೆಯವರಿಗೆ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಸದಸ್ಯರಾದ ವಿನಾಯಕ ಭಟ್, ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ರಮ್ಯಾ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಖಾ ಜಿ. ಕೊಡಸರ, ಮಹಾಬಲೇಶ್ವರ್ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಸುಧಾ ಎಸ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು

