ಸುದ್ದಿಬಿಂದು ಬ್ಯೂರೋ ವರದಿ
ಹಾವೇರಿ : ಆಸ್ತಿಯ ಆಸೆಗೆ ಬಿದ್ದ ಮಕ್ಕಳು ಹೆತ್ತ ತಂದೆಯ ಜೀವವನ್ನೇ ಬಲಿಪಡೆದಿರುವ ಕರುಣಾಜನಕ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಶಿರಬಡಗಿ ಗ್ರಾಮದಲ್ಲಿ ಇತ್ತೀಚೆಗೆ ಜೂನ್ 15ರಂದು ಮೃತಪಟ್ಟಿದ್ದ 75 ವರ್ಷದ ವೃದ್ಧ ಗುರುಬಸಪ್ಪ ಯಲ್ಲಪ್ಪ ಬಸಾಪುರ ಅವರದ್ದು ಕೊಲೆ ಎಂಬ ಶಂಕೆ ವ್ಯಕ್ತವಾಗಿದ್ದು, ಅವರ ಮೃತದೇಹವನ್ನು ಹೊರತೆಗೆದು ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಗುರುಬಸಪ್ಪ ಬಸಾಪುರ ಅವರಿಗೆ ಐವರು ಮಕ್ಕಳಿದ್ದು.ಹಿರಿಯ ಮಗ ರವಿ ಬಸಾಪುರ, ಸೇರಿದಂತೆ ಉಳಿದ ನಾಲ್ವರು ರೇಖಾ, ಸುಜಾತಾ, ಗಿರಿಜಾ ಮತ್ತು ಪಾರ್ವತಿ ಎಂಬ ಹೆಣ್ಣು ಮಕ್ಕಳಿದ್ದಾರೆ.ಗುರುಬಸಪ್ಪ ಅವರ ಒಟ್ಟು 27ಎಕರೆ ಇಡೀ ಕೃಷಿ ಭೂಮಿ ಆಸ್ತಿಯನ್ನು ತಮ್ಮ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಸಮನಾಗಿ ಹಂಚಿಕೆ ಮಾಡಿದ್ದರು, ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಹಿರಿಯ ಮಗ ರವಿ ಬಸಾಪುರ, ತೀವ್ರ ಅಸಮಾಧಾನಗೊಂಡು, ತಂದೆಯ ಈ ತಾರತಮ್ಯದ ನಿರ್ಧಾರದಿಂದ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವಿವಾದದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ, ಕಳೆದ ಜೂನ್ 15ರಂದು ಗುರುಬಸಪ್ಪ ಅವರು ತಮ್ಮದೇ ತೋಟದಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದರು. ಇನ್ನೂ ಆಸ್ತಿ ಹಂಚಿಕೆಯ ಜಗಳದಲ್ಲಿ ತಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ನಮ್ಮ ತಂದೆ ಇಡೀ 27ಎಕರೆ ಆಸ್ತಿಯನ್ನು ನಾಲ್ಕು ಜನ ಹೆಣ್ಣು ಮಕ್ಕಳಿಗೆ ಬರೆದುಕೊಟ್ಟರು ಎಂಬ ಒಂದೇ ಒಂದು ಕಾರಣಕ್ಕೆ ಅಣ್ಣನಾದ ರವಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾನೆ” ಎಂದು ಸಹೋದರಿಯರು ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನೂ ಗುರುಬಸಪ್ಪ ಅವರ ಸಾವು ಸಹಜ ಸಾವಲ್ಲ, ಅದು ಕೊಲೆ ಎಂದು ಒಡಹುಟ್ಟಿದವರ ನಡುವೆ ಗಲಾಟೆಗಳು ಶುರುವಾಗಿ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರುಗಳನ್ನು ದಾಖಲಿಸಿದ್ದಾರೆ. ಗುರುಬಸಪ್ಪ ಅವರ ನಿಗೂಢ ಸಾವಿನ ಸುತ್ತ ಹತ್ತಾರು ಅನುಮಾನಗಳು ಮೂಡಿರುವ ಹಿನ್ನೆಲೆಯಲ್ಲಿ, ಸವಣೂರು ತಾಲೂಕು ತಹಶಿಲ್ದಾರ್ ರವಿ ಕೊರವರ ಅವರ ಸಮ್ಮುಖದಲ್ಲಿ ಜೂನ್ 15ರಂದು ಹೂತಿಟ್ಟಿದ್ದ ವೃದ್ಧನ ಶವವನ್ನು 9 ದಿನಗಳ ಬಳಿಕ ಹೊರತೆಗೆದು ಸ್ಥಳದಲ್ಲೇ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಿದರು, ವರದಿ ಬಂದ ನಂತರ, ಗುರುಬಸಪ್ಪ ಅವರ ನಿಗೂಢ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ

