ಸುದ್ದಿಬಿಂದು ಬ್ಯೂರೋ ವರದಿ

ಭಟ್ಕಳ: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕಳ್ಳತನ ಆರೋಪಿಯನ್ನ ಬಂಧಿಸಿ ಕಳುವಾಗಿದ್ದ 4.50 ಲಕ್ಷ ಮೌಲ್ಯದ 29.01 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

ಮೇ 8, 2026ರಂದು ಭಟ್ಕಳದ ಕಿದ್ವಾಯಿ ರಸ್ತೆಯ 1ನೇ ಕ್ರಾಸ್ ನಿವಾಸಿ ನಾಹಿದ್ ಅಕ್ತರ್ ಅವರು ನೀಡಿದ ದೂರಿನಲ್ಲಿ ಅಂದು ಮುಂಜಾನೆ ಸುಮಾರು 12.50 ಗಂಟೆ ವೇಳೆಗೆ ದುಷ್ಕರ್ಮಿಗಳು ಮನೆಯ ಹಿಂಬಾಗಿಲಿನ ಪಕ್ಕದ ಕಿಟಕಿಯ ಗಾಜು ಒಡೆದು ಒಳನುಗ್ಗಿದ್ದರು.ಬಳಿಕ ಬಾಗಿಲಿನ ಚಿಲಕ ತೆರೆದು ಮನೆಯೊಳಗೆ ಪ್ರವೇಶಿಸಿ, ಸುಮಾರು  5.50 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 58/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 331(4) ಹಾಗೂ 305ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ತನಿಖೆ ವೇಳೆ ಆರೋಪಿಯಾಗಿರುವ ಭಟ್ಕಳದ ಬದ್ರಿಯಾ ಕಾಲೋನಿಯ ನಿವಾಸಿ ಫೌಜಾನ್ ಅಹ್ಮದ್ (21) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆತ ಕಳವು ಮಾಡಿದ್ದ ಚಿನ್ನಾಭರಣವನ್ನು ಬೆಂಗಳೂರಿನ ಮಣಪ್ಪುರಂ ಫೈನಾನ್ಸ್ ಶಾಖೆಯಲ್ಲಿ ಅಡಮಾನ ಇಟ್ಟಿರುವುದು ಬೆಳಕಿಗೆ ಬಂದಿತು.

ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಡಮಾನದಲ್ಲಿದ್ದ 4.50 ಲಕ್ಷ ಮೌಲ್ಯದ 29.01 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.

ಭಟ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿವಾಕರ್ ಪಿ.ಎಂ. ಅವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ನವೀನ್ ಎಸ್. ನಾಯ್ಕ್ ಹಾಗೂ ಸಿಬ್ಬಂದಿಗಳಾದ ದಿನೇಶ್ ನಾಯ್ಕ್, ಸತೀಶ್ ಭಟ್, ರವಿ ಪಟಗಾರ, ಮಹಾಂತೇಶ್ ಹಿರೇಮಠ ಮತ್ತು ಕಾಶಿನಾಥ ಕೋಟಗುಣಶಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.