ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಸಮೀಪದ ಇಡ್ತಳ್ಳಿ ಗ್ರಾಮದಲ್ಲಿ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾದ ಅಣ್ಣ–ತಮ್ಮಂದಿರ ನಡುವೆ ನಡೆದ ವೈಷಮ್ಯ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಪರಮೇಶ್ವರ ಬಾಬು ನಾಯ್ಕ್ (35) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪ ಪರಮೇಶ್ವರ ತಿಮ್ಮಾ ನಾಯ್ಕ್ (27) ವಿರುದ್ಧ ಕೇಳಿಬಂದಿದೆ. ಇಬ್ಬರೂ ಸಂಬಂಧದಲ್ಲಿ ಅಣ್ಣ–ತಮ್ಮಂದಿರಾಗಿದ್ದು, ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳಾಗಿದ್ದಾರೆ.
ಕಳೆದ ಒಂದೆರಡು ವರ್ಷಗಳಿಂದ ಆರೋಪಿ ಪರಮೇಶ್ವರ ತಿಮ್ಮಾ ನಾಯ್ಕ್, ಮೃತ ಪರಮೇಶ್ವರ ಬಾಬು ನಾಯ್ಕ್ ಅವರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪವಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ ಮಾತನಾಡುವುದು ಇದೆ “ಹೊರಗೆ, ಬಾ” ಎಂದು ಮೃತನನ್ನು ಕರೆದುಕೊಂಡು ಹೋದ ಆರೋಪಿ, ಸಮೀಪದ ಅರಣ್ಯ ಪ್ರದೇಶದಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯ ನಿಖರ ಕಾರಣ ಹಾಗೂ ಘಟನೆ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ/ಮಾಂಗಲ್ಯ ಸರ ದರೋಡೆ ಪ್ರಕರಣ : 24 ಗಂಟೆಯೊಳಗೆ ಆರೋಪಿ ಬಂಧನ

