ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಮಾನ್ಸೂನ್ ಮಳೆ (rain ) ನಿಧಾನವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು “ಪವರ್ ಕಟ್” ( power cut) ಎನ್ನುವುದು ಕುಮಟಾದಲ್ಲಿ ಆಗುತ್ತದೆ ಎಂದರೆ ನಾವೆಲ್ಲರೂ ನಂಬಲೇ ಬೇಕು.
ವಿಚಿತ್ರವೆಂದರೆ ಇಲ್ಲಿ ಪವರ್ ಕಟ್ ಮಾಡುವುದಕ್ಕೆ ಗಾಳಿಯೂ ಬೇಕಿಲ್ಲ, ಮಳೆಯೂ ಬೇಕಿಲ್ಲ ಎಂದು ಜನ ವ್ಯಂಗ್ಯ ಮಾಡುವಷ್ಟರ ಮಟ್ಟಿಗೆ ಇಲ್ಲಿ ಕರೆಂಟ್ ಕಳ್ಳಾಟ ಆಡುತ್ತಿದೆ. ಜನ ಹೆಸ್ಕಾಂ ಕಚೇರಿಗೆ ಫೋನ್ (phone) ಮಾಡಿದರೆ ಒಂದೋ ಅವರು ರಿಸೀವರ್ ಎತ್ತಿಡುತ್ತಾರೆ. ಇಲ್ಲಾಂದ್ರೆ “ಟ್ರಿಪ್ ಆಗಿದೆ, ಬರುತ್ತದೆ” ಎಂಬ ಸಿದ್ಧ ಉತ್ತರ ನೀಡುತ್ತಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಮಹಿಳೆಯೊಬ್ಬರು ಕುಮಟಾ ಹೆಸ್ಕಾಂ ಇಂಜಿನಿಯರ್ ಒಬ್ಬರಿಗೆ ಕರೆಂಟ್ ಇಲ್ಲ ಎಂದು ಕರೆ ಮಾಡಿದಾಗ ಸರ್ಕಾರಿ ಸಂಬಳ ತೆಗೆದುಕೊಳ್ಳುವ ಇಂಜಿನಿಯರ್ ಮಹಾಶಯ “ನೀವು ಇನ್ವರ್ಟರ್ ಹಾಕಿಕೊಳ್ಳಿ” ಎಂದು ಪುಗಸಟ್ಟೆ ಸಲಹೆ ನೀಡಿದ್ದರು. ಆ ಆಡಿಯೋ ಅಂದು ವೈರಲ್ ಆಗಿತ್ತು. ಕೆಲ ಮಾಧ್ಯಮಗಳಲ್ಲಿ ಸುದ್ದಿಯೂ ಆಗಿತ್ತು. ಅಂದು ಇಂಜಿನಿಯರ್ ಇನ್ವರ್ಟರ್ ಪ್ರೊಮೋಷನ್ ಮಾಡಿದ ಬಗ್ಗೆ ಜನ ಈಗಲೂ ಅನುಮಾನ ವ್ಯಕ್ತ ಪಡಿಸುತ್ತಿದ್ದು, ಹೆಸ್ಕಾಂನವರು ಇನ್ವರ್ಟರ್ ಕಂಪನಿಗಳಿಗೆ ಸಹಾಯ ಆಗಲೆಂದೇ ಪದೇಪದೆ ಕರೆಂಟ್ ತೆಗೆಯುತ್ತಿದ್ದಾರಾ… ಎಂದು ಕುಮಟಾ ಜನ ಅನುಮಾನದ ಪ್ರಶ್ನೆ ಕೇಳುತ್ತಿದ್ದಾರೆ.
ಇನ್ನಾದರೂ ಕುಮಟಾ ಹೆಸ್ಕಾಂನ ಕರೆಂಟ್ ಕಣ್ಣಾಮುಚ್ಚಾಲೆ ಆಟ ಸರಿಯಾಗುತ್ತದೋ ಅಥವಾ ಜನರ “ಇನ್ವರ್ಟರ್” ಅನುಮಾನ ನಿಜವಾಗುತ್ತದೋ ಕಾದು ನೋಡಬೇಕು

