ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಮದುವೆ ಸಮಾರಂಭಗಳಲ್ಲಿ ಮದುಮಗನ ಮನೆಗೆ ಸಾಗುವ ದಿಬ್ಬಣ (ಬಾರಾತ್) ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಣವನ್ನು ಇನ್ನು ಮುಂದೆ ಮಾಡದಿರಲು ಕಾರವಾರ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರವಾರ ತಾಲೂಕಿನ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಸಂತಾನ್ ಫರ್ನಾಂಡೀಸ್ ಅವರು , ಇತ್ತೀಚಿನ ದಿನಗಳಲ್ಲಿ ಮದುವೆ ದಿಬ್ಬಣ ಕಾರ್ಯಕ್ರಮಗಳು ತಡ ರಾತ್ರಿವರೆಗೂ ನಡೆಯುತ್ತಿರುವುದರಿಂದ ಫೋಟೋಗ್ರಾಫರ್ಗಳು ಹಾಗೂ ವಿಡಿಯೊಗ್ರಾಫರ್ಗಳು ನಿಗದಿತ ಸಮಯ ಮೀರಿಯೂ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ಚಿತ್ರೀಕರಣದ ವೇಳೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ನಡೆದಿರುವುದಲ್ಲದೆ, ದುಬಾರಿ ಕ್ಯಾಮೆರಾಗಳನ್ನು ಕಸಿಯಲು ಯತ್ನಿಸಿದ ಘಟನೆಗಳೂ ನಡೆದಿವೆ. ಇದರಿಂದ ಸಿಬ್ಬಂದಿಯ ಸುರಕ್ಷತೆ ಹಾಗೂ ಉಪಕರಣಗಳ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಇನ್ನು ಮುಂದೆ ಮದುವೆ ಮಂಟಪ ಅಥವಾ ಕಲ್ಯಾಣ ಮಂಟಪದ ಒಳಗಡೆಯ ಕಾರ್ಯಕ್ರಮಗಳಿಗೆ ಮಾತ್ರ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಸೀಮಿತಗೊಳಿಸಲು ಹಾಗೂ ದಿಬ್ಬಣ (ಬಾರಾತ್) ಕಾರ್ಯಕ್ರಮಗಳ ಚಿತ್ರೀಕರಣದಿಂದ ದೂರ ಉಳಿಯಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಫೋಟೋಗ್ರಫಿ ಕ್ಷೇತ್ರದಲ್ಲಿ ಬಳಸುವ ಕ್ಯಾಮೆರಾ, ಲೈಟಿಂಗ್ ಸೇರಿದಂತೆ ವಿವಿಧ ಉಪಕರಣಗಳ ಬೆಲೆ ಹಾಗೂ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಕಾರಣ ಪಾಸ್ಪೋರ್ಟ್ ಸೈಜ್ ಫೋಟೊ ಸೇರಿದಂತೆ ವಿವಿಧ ಫೋಟೋಗ್ರಫಿ ಸೇವೆಗಳ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಗೌರವಾಧ್ಯಕ್ಷ ಸೂರಜ್ ಜೋಗಳೇಕರ್, ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರದ ರವಿ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಅನಂತ ಪೈ, ಕಾರ್ಯದರ್ಶಿ ಜಯಪ್ರಕಾಶ್ ಗೋಸಾವಿ ಹಾಗೂ ಸದಸ್ಯರು ಅನಿಲ್ ನಾಯ್ಕ, ಮನೋಜ ನಾಯ್ಕ, ಪ್ರಮೋದ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.



