ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಚಿಪ್ಪೆಕಲ್ಲು ದುರಂತದಲ್ಲಿ ಮೃತಪಟ್ಟ ೧೧ ಮಂದಿಯ ಕುಟುಂಬಗಳ ದುಃಖದ ಛಾಯೆ ಇನ್ನೂ ಕಣ್ಣಮುಂದೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ಹುಟ್ಟುಹಬ್ಬದಂದು ನಿಕಟಪೂರ್ವ ಸಚಿವ ಮಂಕಾಳ ವೈದ್ಯ ಮೃತರ ಸ್ಮರಣಾರ್ಥ ೧೧ ಗಿಡಗಳನ್ನು ನೆಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು.

ಅರಣ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೧೧ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಚಿಪ್ಪೆಕಲ್ಲು ದುರಂತದಲ್ಲಿ ಅಕಾಲಿಕವಾಗಿ ಮೃತಪಟ್ಟವರ ನೆನಪು ಸದಾ ಸಮಾಜದ ಮನಸ್ಸಿನಲ್ಲಿ ಉಳಿಯಲಿದೆ. ಅವರ ಸ್ಮರಣಾರ್ಥ ನೆಡಲಾದ ಈ ಗಿಡಗಳು ಮುಂದಿನ ದಿನಗಳಲ್ಲಿ ಬೆಳೆದು ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಲಿದೆ ಎಂದು ಹೇಳಿದರು.

ಪ್ರಕೃತಿಯಲ್ಲಿ ಲೀನವಾದವರ ಸ್ಮರಣೆಯನ್ನು ಉಳಿಸಿಕೊಳ್ಳಲು ಮರ-ಗಿಡಗಳನ್ನು ನೆಡುವುದು ಅತ್ಯಂತ ಅರ್ಥಪೂರ್ಣ ಕಾರ್ಯವಾಗಿದೆ. ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಕರಾವಳಿ ಭಾಗದಲ್ಲಿ ಈ ವರ್ಷ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಮತ್ತು ಯುವಜನರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟರೆ ಮುಂದಿನ ಐದರಿಂದ ಆರು ವರ್ಷಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಇಂದು ದೆಹಲಿಯಂತಹ ಮಹಾನಗರಗಳು ಎದುರಿಸುತ್ತಿರುವ ಪರಿಸರ ಸಮಸ್ಯೆಗಳು ನಮ್ಮ ಭಾಗವನ್ನೂ ಕಾಡುವ ಅಪಾಯವಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಅರಣ್ಯ ಇಲಾಖೆಯ ಡಿಸಿಎಫ್ ಯೋಗೇಶ್ ಸಿ.ಕೆ., ಎಸಿಎಫ್ ಗಿರೀಶ್ ಬಿ., ಆರ್‌ಎಫ್‌ಒ ವಿಶ್ವನಾಥ ಎ.ವಿ., ಜನತಾ ವಿದ್ಯಾಲಯದ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೂಲಕ ಪರಿಸರ ಜಾಗೃತಿ ಮತ್ತು ದುರಂತದಲ್ಲಿ ಮೃತಪಟ್ಟವರ ಸ್ಮರಣೆ ಎರಡಕ್ಕೂ ವಿಶೇಷ ಮಹತ್ವ ನೀಡಲಾಯಿತು.

ಇದನ್ನೂ ಓದಿ/ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ