ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ತಾಲೂಕಿನ ಶಿರಾಲಿ ಸಮೀಪ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ 11 ಮಂದಿ ಮೃತಪಟ್ಟ ಘಟನೆ ಇಡೀ ಉತ್ತರ ಕನ್ನಡ ಜಿಲ್ಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ದುರ್ಘಟನೆಯ ಹಿನ್ನೆಲೆ ತನ್ನ ಜನ್ಮದಿನ ಆಚರಣೆಯನ್ನು ಈ ವರ್ಷ ನಡೆಸುವುದಿಲ್ಲ ಎಂದು ಮೀನುಗಾರಿಕಾ ಇಲಾಖೆ ಸಚಿವ ಮಂಕಾಳ್ ವೈದ್ಯ ಘೋಷಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ವಿತರಿಸಿದ ಸಂದರ್ಭದಲ್ಲಿ ಮಾತನಾಡಿದ ಸಚಿವ ವೈದ್ಯ, “11 ಅಮಾಯಕ ಜೀವಗಳನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಜೂನ್ 5ರಂದು ಇರುವ ನನ್ನ ಜನ್ಮದಿನವನ್ನು ಈ ವರ್ಷ ಆಚರಿಸಿಕೊಳ್ಳುವುದಿಲ್ಲ. ಮೃತರ ಕುಟುಂಬಗಳ ದುಃಖದಲ್ಲಿ ನಾನು ಸಹ ಭಾಗಿಯಾಗಿದ್ದೇನೆ” ಎಂದು ಹೇಳಿದರು.

ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ ₹5 ಲಕ್ಷ, ಮೀನುಗಾರಿಕಾ ಇಲಾಖೆಯಿಂದ ₹10 ಲಕ್ಷ, ಸಚಿವ ಮಂಕಾಳ್ ವೈದ್ಯ ಅವರ ವೈಯಕ್ತಿಕ ನೆರವಿನಿಂದ ತಲಾ ₹1 ಲಕ್ಷ ಹಾಗೂ ಸಚಿವರ ಬ್ಯಾಂಕ್ ವತಿಯಿಂದ ₹50 ಸಾವಿರ ಪರಿಹಾರವನ್ನು ವಿತರಿಸಲಾಯಿತು.

ದುರಂತದಲ್ಲಿ ಕುಟುಂಬದ ಆಧಾರಸ್ತಂಭರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಭರವಸೆಯನ್ನು ಸಚಿವರು ನೀಡಿದರು. ಇದೇ ವೇಳೆ ಮೃತರ ಕುಟುಂಬಗಳ ನೋವಿನಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಈ ವರ್ಷದ ಹುಟ್ಟುಹಬ್ಬದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದರು.
ಸಚಿವರ ಈ ನಿರ್ಧಾರಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ನಿಲ್ಲುವ ಮಾನವೀಯ ಬಗ್ಗೆ ಪ್ರಶಂಸಿಸಿದ್ದಾರೆ.

ಇದನ್ನೂ ಓದಿ/ಶಿರಾಲಿ ಚಿಪ್ಪೆಕಲ್ಲು ದುರಂತಕ್ಕೆ ಮಾನವೀಯ ಸ್ಪಂದನೆ : ಸಚಿವ ಮಂಕಾಳ ವೈದ್ಯರಿಂದ ೧೦ ಲಕ್ಷ ಹೆಚ್ಚುವರಿ ನೆರವು