ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ :ಹಣಕಾಸಿನ ವಿಚಾರವಾಗಿ ಉಂಟಾದ ವೈಮನಸ್ಸು ಮಾರಕಾಸ್ತ್ರ ಹಲ್ಲೆಗೆ ಕಾರಣವಾಗಿದ್ದು ಏಳು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತೆರಕನಹಳ್ಳಿಯಲ್ಲಿ ನಡೆದಿದೆ.
ಕಿರುತೆರೆ ನಟ ಹಾಗೂ ಹಲವು ಕಿರುಚಿತ್ರಗಳಲ್ಲಿ ಅಭಿನಯಿಸಿರುವ ಸಂಕೇತ್ ಮೇಸ್ತಾ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ. ಮಾರಿಗುಡಿ ಸೇರಿದಂತೆ ಅನೇಕ ಕಿರುಚಿತ್ರಗಳಲ್ಲಿ ನಟಿಸಿರುವ ಸಂಕೇತ್ ಮೇಸ್ತಾ ಹೆಸರು ಪ್ರಕರಣದಲ್ಲಿ ಕೇಳಿಬಂದಿದೆ. ಶಿರಸಿಯ ರಾಮನಬೈಲಿನ ಸುಮಾರು 20 ಜನರ ಗುಂಪು ಕಾರು, ಜೀಪು, ಆಟೋ ಹಾಗೂ ಬೈಕ್ಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಬಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಬ್ಬಿಣದ ರಾಡ್ ಹಾಗೂ ಪಂಚ್ಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ತೆರಕನಹಳ್ಳಿಯ ತುಕಾರಾಮ ನಾಯ್ಕ, ಸುನೀಲ ನಾಯ್ಕ, ರೇಖಾ ನಾಯ್ಕ, ಸುಭಾಸ್ ನಾಯ್ಕ, ಕವಿತಾ ನಾಯ್ಕ ಹಾಗೂ ಸುಮನಾ ಸುಭಾಸ್ ನಾಯ್ಕ ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಕೇತ್ ಮೇಸ್ತ, ನಾಗರಾಜ ಮೇಸ್ತ, ಜನ್ನು ಮೇಸ್ತ, ಪೃಥ್ವಿ ಶಿವರಾಜ, ಶಿವರಾಜ, ಗಗನ ಮೇಸ್ತ, ಶರತ್ ಮೇಸ್ತ, ರಫಿಕ್ ಸೇರಿದಂತೆ ಇತರರು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಗೊಳಗಾದ ತುಕಾರಾಮ ನಾಯ್ಕ ಹಾಗೂ ಸಂಕೇತ್ ಮೇಸ್ತಾ ಸಂಬಂಧಿ ನಾಗರಾಜ ಮೇಸ್ತಾ ನಡುವೆ ಇದ್ದ ಹಣಕಾಸಿನ ಜಗಳವೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ/ಮದುವೆಗೆ ತೆರಳಿದ್ದ ಮಿನಿ ಬಸ್ ಅಪಘಾತ : ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ

