ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಹೋರಾಟಗಾರ ಎಂದ ಮೇಲೆ ಆತ ಜನರ  ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು ಸಹಜ. ಅದೇ ರೀತಿ ಕ್ಷೇತ್ರದಲ್ಲಿನ ಸಮಸ್ಯೆ ಬಗ್ಗೆ ಜನಪರ ಹೋರಾಟಗಾರನೊರ್ವ ಧ್ವನಿ ಎತ್ತಿದರೆ ಅವರ ಧ್ವನಿಯನ್ನು ಕುಗ್ಗಿಸುವುದು ಎಷ್ಟು ಸರಿ ಎನ್ನುವ ಬಗ್ಗೆ ಜನಸಾಮಾನ್ಯರು ಕೂಡ ಈಗ ಪ್ರಶ್ನೆ ಮಾಡುತ್ತಿದ್ದಾರೆ.

ಕುಮಟಾದ ಮಿನಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಆಹವಾಲು ಸ್ವೀಕಾರ ಸಭೆಯಲ್ಲಿ ಕನ್ನಡಪರ ಸಂಘಟನೆಯ ಮುಂಚೂಣಿ ಹೋರಾಟಗಾರ ಭಾಸ್ಕರ ಪಟಗಾರ ಅವರು ಜನತೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ. ಆದರೆ ಸ್ಥಳೀಯ ಶಾಸಕ, ಆಗಿರುವ ಸಮಸ್ಯೆ ಸರಿಪಡಿಸೋಣ ಅಥವಾ ಇದು ತಮ್ಮ ಗಮನಕ್ಕಿಲ್ಲ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಸರಿಪಡಿಸುವ ಕೆಲಸ ಮಾಡುವುದಾಗಿ ಹೇಳುವುದನ್ನು ಬಿಟ್ಟು, “ನಿಮ್ಮ ಅಂಗಡಿ ಮುಂದೆ ರಸ್ತೆಯಲ್ಲಿ ಇಟ್ಟಿರುವ ಕಲ್ಲು-ಚಪ್ಪಡಿಗಳನ್ನು ತೆಗೆದು ಬೇರೆ ವಿಚಾರದ ಬಗ್ಗೆ ಮಾತನಾಡಿ” ಎಂದು ಗದರಿಸಿರುವುದಲ್ಲದೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡ ನಡೆದಿದೆ. ಶಾಸಕರ ಈ ವರ್ತನೆ ಸರಿಯೇ? ಇದು ಹೋರಾಟಗಾರನ ದನಿ ಅಡಗಿಸುವ ತಂತ್ರವೇ? ಎನ್ನುವ ಬಗ್ಗೆ ಜನರಲ್ಲಿ ಈಗ ಚರ್ಚೆ ಆರಂಭವಾಗಿದೆ.

ಶಾಸಕ 100% ಕನ್ನಡ ಮಾತನಾಡುತ್ತಾರಾ?
ಸಾರ್ವಜನಿಕ ಆಹವಾಲು ಸ್ವೀಕಾರ ಸಭೆಯಲ್ಲಿ ಜನರ ಪರ ಧ್ವನಿ ಎತ್ತಿದ್ದ ಹೋರಾಟಗಾರ ಭಾಸ್ಕರ ಪಟಗಾರ ಅವರು ಮಾತಿನ ನಡುವೆ ಒಂದು ಇಂಗ್ಲೀಷ್ ಪದ ಬಳಕೆ ಮಾಡಿದ್ದಾರೆ. ಇದು ಮಹಾಪರಾಧ ಎನ್ನುವಂತೆ ಬಿಂಬಿಸಲು ಯತ್ನಿಸಿದ ಶಾಸಕ, “ನೀವು ಕನ್ನಡಪರ ಹೋರಾಟಗಾರರು ಕನ್ನಡದಲ್ಲೇ ಮಾತನಾಡಬೇಕು, ಇಂಗ್ಲೀಷಿನಲ್ಲಿ ಮಾತನಾಡುವುದು ಸರಿಯಲ್ಲ” ಎಂದು ಹೇಳುವ ಮೂಲಕ ವಿಷಯಾಂತರ ಮಾಡಿ ಹೋರಾಟಗಾರನ ದನಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವ ಬಗ್ಗೆ ಕುಮಟಾದಲ್ಲಿ ಈಗ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ ಜನಪ್ರತಿನಿಧಿ  ನೂರಕ್ಕೆ ನೂರು ಕನ್ನಡದಲ್ಲಿ ಮಾತನಾಡಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೀಗ ಉದ್ಭವವಾಗಿದೆ. ನೀವು ಕನ್ನಡ ನೆಲದಲ್ಲಿದ್ದೀರಿ, ಕನ್ನಡದ ವಾಯು, ನೀರನ್ನು ನೀವು ಸಹ ಬಳಸುತ್ತಿದ್ದೀರಿ. ನೀವು ಎಲ್ಲಾ ಶಬ್ದಗಳನ್ನು ಸದಾ ಕನ್ನಡದಲ್ಲೇ ಮಾತನಾಡುತ್ತೀರಾ? ಎನ್ನುವ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ. ಈಗಿನ ಕಂಗ್ಲೀಷ್ ಕಾಲದಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುವುದಕ್ಕೆ ಸಾಧ್ಯವೇ? ಹೋರಾಟಗಾರ ಮಾತ್ರ ಯಾಕೆ ಕನ್ನಡದಲ್ಲಿ ಮಾತಾಡಬೇಕು? ಜನಪ್ರತಿನಿಧಿಗೂ ಕನ್ನಡದ ಜವಾಬ್ದಾರಿ ಇಲ್ಲವೇ? ಎಂಬ ಪ್ರಶ್ನೆ ಇದೀಗ ಸಹಜವಾಗಿಯೇ ಹುಟ್ಟಿಕೊಂಡಿದೆ.

ಈ ರಣ ಬೇಸಿಗೆಯಲ್ಲಿ ಕೆಲವೆಡೆ ಜನ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ದಿಢೀರ್ ಮಳೆ ಬಂದರೆ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ, ಕೆಲವೆಡೆ ಗುಡ್ಡ ಕುಸಿಯುವ ಭೀತಿ ಇದೆ. ಇವೆಲ್ಲದರ ಬಗ್ಗೆ ಓರ್ವ ಹೋರಾಟಗಾರ ಬೀದಿಯಲ್ಲಿ ನಿಂತು ಹೋರಾಟ ಮಾಡಿದರೆ ಅದು ತಪ್ಪು ಎನ್ನುವ ಜನಪ್ರತಿನಿಧಿಯಿಂದ ಕ್ಷೇತ್ರದ ಜನ ಅಭಿವೃದ್ಧಿ ಕಾಣಲು ಸಾಧ್ಯವೇ? ಎನ್ನುವ ಮಾತು ಕೂಡ ಸಾರ್ವಜನಿಕ ಆಹವಾಲು ಸಭೆಯ ಬಳಿಕ ಮುನ್ನೆಲೆಗೆ ಬಂದಿದೆ.

ಕುಮಟಾ ಸುತ್ತಮುತ್ತ ಯಾವುದೇ ಸಮಸ್ಯೆ ಆದರೂ ಸಾಮಾನ್ಯ ಜನರ ಪರವಾಗಿ ಭಾಸ್ಕರ ಪಟಗಾರ ಧ್ವನಿ ಎತ್ತುತ್ತಾರೆ.  ಹಿಂದುಳಿದ ವರ್ಗದಿಂದ ಬಂದ ಭಾಸ್ಕರ ಪಟಗಾರರ ಹೆಸರು  ಜಿಲ್ಲಾದ್ಯಂತ ಪ್ರಚಲಿತದಲ್ಲಿದೆ. ಅವರ ಹೋರಾಟವನ್ನು ಗಮನಿಸುತ್ತಾ ಹೋದರೆ ಸಣ್ಣ ಸಣ್ಣ ವಿಚಾರದಿಂದ ದೊಡ್ಡ ದೊಡ್ಡ ಸಮಸ್ಯೆವರೆಗೂ ಅವರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಭಾಸ್ಕರ ಪಟಗಾರ ಅವರನ್ನು ಹೊರತುಪಡಿಸಿದರೆ ಯಾವೊಬ್ಬ ಹೋರಾಟಗಾರರೂ ಜನಪರವಾಗಿ ಜನಪ್ರತಿನಿಧಿಗಳನ್ನು, ಕೆಲವೊಮ್ಮೆ ಅಧಿಕಾರಿಗಳನ್ನು ಎದುರು ಹಾಕಿಕೊಂಡು ಹೋರಾಟ ಮಾಡುವ ಶಕ್ತಿಯನ್ನು ಕಳೆದುಕೊಂಡಿರುವಂತೆ ಕಾಣುತ್ತಿದೆ ಎನ್ನುವ ಬಗ್ಗೆ ಸಹ ಜನ ಚರ್ಚೆ ಮಾಡುತ್ತಿದ್ದಾರೆ.

ಭಾಸ್ಕರ ಪಟಗಾರ ಸದಾ ಬಡವರ ಪರ, ಕೈಲಾಗದವರ ಪರ, ಶ್ರಮಜೀವಿಗಳ ಪರ, ರಿಕ್ಷಾ ಚಾಲಕರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ನ್ಯಾಯಯುತ ಹೋರಾಟದ ಮೂಲಕ ಗುರುತಿಸಿಕೊಂಡಿರುವ, ಅದರಲ್ಲೂ ಜನರ ಪರವಾಗಿ ಹೋರಾಟ ನಡೆಸುತ್ತಿರುವ ಭಾಸ್ಕರ ಪಟಗಾರ ಅವರ ಹೋರಾಟದ ಧ್ವನಿಯನ್ನು ಅಡಗಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ ಎನ್ನುವ ಬಗ್ಗೆ ಜನ ಮಾತಾಡುತ್ತಿದ್ದಾರೆ ಎಂದರೆ ಇದರಲ್ಲೆನೋ ಇದೆ ಎಂದೇ ಅರಿಯಬೇಕಿದೆ.

ಜನಪ್ರತಿನಿಧಿಗೆ ಚರ್ಚಿಸಲು ಬೇಕಾದಷ್ಟು ವಿಷಯವಿದೆ,
ಜನಪ್ರತಿನಿಧಿಯಾದವರು ಯಾವತ್ತೂ ಪ್ರಶ್ನೆ ಮಾಡುವವರನ್ನು ಟಾರ್ಗೆಟ್ ಮಾಡಬಾರದು. ಸಾರ್ವಜನಿಕ ಆಹವಾಲು ಸ್ವೀಕಾರ ಸಭೆಯಲ್ಲಿ ಎಲ್ಲರೂ ಒಂದೊಂದು ವಿಚಾರವನ್ನು ಹಿಡಿದು ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹೋರಾಟಗಾರರ ಮೂಲಕ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ಇದು ಕುಮಟಾ ಕ್ಷೇತ್ರದಲ್ಲಿ ಮಾತ್ರ ಇರುವ ಬೆಳವಣಿಗೆ ಅಲ್ಲ. ಸಮಸ್ಯೆಗಳನ್ನು ಗಮನಕ್ಕೆ ತರುವುದೇ ಇವರಿಗೆ ಸಮಸ್ಯೆಯಾಗಲಿದೆ ಎಂದರೆ ಜನಪ್ರತಿನಿಧಿ ಎಂದು ಕರೆಸಿಕೊಳ್ಳುವುದು ಯಾಕೆ? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ/Murder case/ಉತ್ತರಕನ್ನಡದಲ್ಲಿ ಭೀಕರ ಕೊಲೆ: ಗುಂಡು ಹಾರಿಸಿ ಬರ್ಬರ ಹತ್ಯೆ