ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಆಪ್ತ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮೇಲಿನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಗೊಂಡಿರುವ ಗೋಪಾಲಕೃಷ್ಣ ನಾಯಕ ಮಾಧ್ಯಮಗಳಿಗೆ ಮಹತ್ವದ ಹೇಳಿಕೆ ಸೂಫಾರಿ‌ ನೀಡಿದವರಿಗೆ ನಡುಕ ಉಂಟಾಗುವಂತೆ ಮಾಡಿದೆ.

ಕಾರವಾರದಲ್ಲಿ ಮಾತನಾಡಿದ ಅವರು, “ಪೊಲೀಸರ ತನಿಖೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ತನಿಖೆಯಲ್ಲಿ ಸತ್ಯ ಹೊರಬರಲಿದೆ ಎಂಬ ನಂಬಿಕೆ ಇದೆ” ಎಂದು ತಿಳಿಸಿದ್ದಾರೆ. ಮಾ.25ರಂದು ತಮ್ಮ ಮೇಲೆ ಹತ್ಯೆ ಯತ್ನ ನಡೆದಿದ್ದು, ಇದರ ಹಿಂದೆ ರಾಜಕೀಯ ದ್ವೇಷ ಕಾರಣವಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದು. ಸಹಕಾರಿ ಕ್ಷೇತ್ರದ ಚುನಾವಣೆಯ ವೇಳೆ ಅಂಕೋಲಾದಲ್ಲಿ ಉದ್ಯಮಿ ಮಯೂರ್ ನಾಯಕ ಜೊತೆ ಉಂಟಾದ ಜಗಳವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಅವರು ಹೇಳಿದರು.

ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ವಿಷಯದಲ್ಲಿ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಹೆಸರು ಕೇಳಿಬರುತ್ತಿದೆ. ಆದರೆ ಅವರು ಈ ಹತ್ಯೆ ಯತ್ನದ ಹಿಂದೆ ಇದ್ದಾರೆ ಎಂದು ನಾನು ಹೇಳುವುದಿಲ್ಲ. ರಾಜಕಾರಣದಲ್ಲಿ ನನ್ನ ಮೇಲೆ ಅವರಿಗೆ ದ್ವೇಷವಿದೆ. ಆದರೂ ಅವರು ಹತ್ಯೆ ಮಾಡಿಸುವ ಮಟ್ಟಕ್ಕೆ ಇಳಿಯುವುದಿಲ್ಲ ಎನ್ನುವ ನಂಬಿಕೆ ಇದೆ” ಎಂದು ಸ್ಪಷ್ಟಪಡಿಸಿದರು. ಮುಂದಿನ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಲು ತಾವು ನಿರ್ಧರಿಸಿದ್ದರಿಂದ ಈ ರೀತಿಯ ಯತ್ನ ನಡೆದಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

“ನನ್ನ ವಿರುದ್ಧ ಹತ್ಯೆ ಸ್ಕೆಚ್ ರೂಪಿಸಲಾಗುತ್ತಿದೆ ಎಂಬ ಮಾಹಿತಿ ನನಗೆ ಇರಲಿಲ್ಲ. ಗೊತ್ತಿದ್ದರೆ ಆಗಲೇ ಪೊಲೀಸ್ ಭದ್ರತೆ ಪಡೆಯುತ್ತಿದ್ದೆ” ಎಂದು ಅವರು ಹೇಳಿದರು.ಈ ಪ್ರಕರಣ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.

ಇದನ್ನೂ ಓದಿ/ಉಪಚುನಾವಣೆಗೂ ಸಿಎಂ ಸ್ಥಾನಕ್ಕೂ ಸಂಬಂಧವಿಲ್ಲ: ಸಿಎಂ ಸ್ಪಷ್ಟನೆ