ಉತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಕನಸಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರ ಈಗ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಯ ಪ್ರಮುಖ ವಿಷಯವಾಗಿ ಪರಿಣಮಿಸಿದೆ. ರಾಜ್ಯ ಬಜೆಟ್‌ನಲ್ಲಿ ಕಾರವಾರದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಿಸಿರುವುದರಿಂದ ಒಂದು ನಿರೀಕ್ಷೆ ಮೂಡಿದರೂ, ಆಸ್ಪತ್ರೆಯ ಸ್ಥಳದ ಬಗ್ಗೆ ಈಗ ಹೊಸ ಚರ್ಚೆ ಆರಂಭವಾಗಿದೆ.

ಈ ಬಗ್ಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಕೂಡ ಅಧಿವೇಶನದಲ್ಲಿ ಸೂಫರ್ ಸ್ಪೇಷಾಲಿಸಿ ಆಸ್ಪತ್ರೆ ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿರುವ ಕುಮಟಾದಲ್ಲೇ ಸ್ಥಾಪನೆ ಆದರೆ ಸೂಕ್ತ ಎನ್ನುವ ವಿಚಾರವನ್ನ ಪ್ರಸ್ತಾಪಾ ಮಾಡಿದ್ದಾರೆ. ಶಾಸಕರ ಆಗ್ರಹ ಸೂಕ್ತವಾಗಿದೆ..ಅವರ ಸರಕಾರ ಇದ್ದಾಗಲ್ಲೂ ಕೂಡ ಶಾಸಕು ಕುಮಟಾದಲ್ಲೇ ಆಗಬೇಕು ಎಂಬ ಆಗ್ರಹ ಮಾಡುತ್ತಲೆ ಬಂದಿದ್ದಾರೆ..ಶಾಸಕರು ತನ್ನ ಕ್ಷೇತ್ರದ ಜನತೆಗೆ ಅನುಕೂಲಕ ಆಗಬೇಕು  ಎನ್ನುವ ಉದ್ದೇಶ ಹೊಂದಿ ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬದಲಾಗಿ ಜಿಲ್ಲೆಯ ಜನರ ಆರೋಗ್ಯದ ವಿಚಾರದಲ್ಲಿ ಜನ ಪರವಾದ  ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಎಲ್ಲಾ ರಾಜಕೀಯ ನಾಯಕರು, ಮುಖಂಡರು ಒಗ್ಗಟ್ಟಾಗಬೇಕಿದೆ.

ಜಿಲ್ಲೆಯ ಭೌಗೋಳಿಕ ವಿನ್ಯಾಸವನ್ನು ಗಮನಿಸಿದರೆ, ಈ ಚರ್ಚೆ ಅಸಂಬದ್ಧವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಉತ್ತರ ಕನ್ನಡ ಜಿಲ್ಲೆ  ಕರಾವಳಿ,ಮಲೆನಾಡು, ಬಯಲು ಸೀಮೆ ಭಾಗಗಳನ್ನು ಒಳಗೊಂಡಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ತುದಿಯಲ್ಲಿ ಇರುವ ಕಾರವಾರದಲ್ಲಿ ಆಸ್ಪತ್ರೆ ನಿರ್ಮಾಣವಾದರೆ, ಶಿರಸಿ, ಸಿದ್ದಾಪುರ, ಭಟ್ಕಳ,ಹೊನ್ನಾವರ  ಸೇರಿದಂತೆ ಇನ್ನೂ ಹೆಚ್ಚಿನ ತಾಲೂಕಿನ ಜನರಿಗೆ ಆರೋಗ್ಯ ಸೇವೆ ತಲುಪುವುದು ಸವಾಲಾಗಬಹುದು. ತುರ್ತು ಚಿಕಿತ್ಸೆಯ ಅಗತ್ಯವಿರುವ ಸಂದರ್ಭಗಳಲ್ಲಿ ದೂರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬಂದರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ದೇಶವೇ ಹಳಿ ತಪ್ಪಿದ ರೈಲಿನಂತಾಗುತ್ತದೆ. ಆರೋಗ್ಯ ಸೇವೆಯ ಮೂಲ ತತ್ವವೇ ಜನರಿಗೆ ಸುಲಭವಾಗಿ ಚಿಕಿತ್ಸೆ ಸಿಗಬೇಕು ಎನ್ನುವುದು. ಈ ದೃಷ್ಟಿಯಿಂದ ಜಿಲ್ಲೆಯ ಮಧ್ಯಭಾಗದಲ್ಲಿರುವ ಕುಮಟಾ ಸೂಕ್ತ ಸ್ಥಳವಾಗಬಹುದು ಎಂಬ ಅಭಿಪ್ರಾಯ ಆಸ್ಪತ್ರೆ ಘೋಷಣೆ ಆಗುವ ಪೂರ್ವದಿಂದಲ್ಲೂ‌ ಕೇಳಿ ಬರತ್ತಲೇ ಇದೆ.

ರಾತ್ರಿ 8 ಗಂಟೆ ಬಳಿಕಾ ಜಿಲ್ಲಾ ಕೇಂದ್ರ ಕಾರವಾರಕ್ಕೆ ಪ್ರಯಾಣಿಸಲು ಒಂದೇ ಒಂದು ಬಸ್ ವ್ಯವಸ್ಥೆ ಕೂಡ ಇಲ್ಲದಂತ ಪರಿಸ್ಥತಿ ಇಂದಿಗೂ ಜೀವಂತವಾಗಿಯೇ ಇದೆ..ಹೀಗಿರುವಾಗ ಬಡ ರೋಗಿಗಳು ಸೂಯಾಸ್ತದ ಬಳಿಕ ಕಾರವಾರ ಆಸ್ಪತ್ರೆಗೆ ಹೋಗುವು ಹೇಗೆ..? ಎಲ್ಲರಿಗೂ ಅಂಬುಲೆನ್ಸ್, ಅಥವಾ ಖಾಸಗಿ ವಾಹನ ಮಾಡಿಕೊಂಡು ಪ್ರಾಣಿಸೋದು ಕಷ್ಟ, ಹಗಲು ಸಮಯದಲ್ಲೂ ಸಹ ಕಾರವಾರಕ್ಕೆ ಬಸ್‌ನಲ್ಲಿ ಪ್ರಯಾಣಿಸೋದು ಅಷ್ಟು ಸುಲಭವಲ್ಲ..ಹೀಗೆಲ್ಲಾ ಇರುವಾಗ ರೋಗಿ ಆಸ್ಪತ್ರೆ ತಲುಪೋದು ಹೇಗೆ…ಇನ್ನೂ ಕಾರವಾರ ರೈಲ್ವೆ ನಿಲ್ದಾಣ ಕೂಡ ಜಿಲ್ಲೆಯ ಎಲ್ಲಾ ತಾಲೂಕಿಗಿಂತ ತೀರಾ ದೂರದಲ್ಲಿದೆ..ಹೀಗಿರುವಾಗ ಜಿಲ್ಲಾ ಕೇಂದ್ರ ಎನ್ನುವ ಮಾತ್ರಕ್ಕೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಾರವಾರದಲ್ಲಿ ಆರಂಭಿಸಿದ್ದರೆ ಮತ್ತೆ ಈ ಹಿಂದೆ ಇದ್ದ ಪರಿಸ್ಥತಿಯೆ ಮುಂದುವರೆಯುವಲ್ಲಿ ಯಾವುದೇ ಅನುಮಾನ ಬೇಡ..

ಕುಮಟಾ ಭೌಗೋಳಿಕವಾಗಿ ಜಿಲ್ಲೆಯ ಕೇಂದ್ರ ಭಾಗದಲ್ಲಿದ್ದು, ಶಿರಸಿ, ಸಿದ್ದಾಪುರ, ಅಂಕೋಲಾ, ಭಟ್ಕಳ ಸೇರಿದಂತೆ ಹಲವು ತಾಲೂಕುಗಳಿಗೆ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ, ರೈಲು ಸಂಪರ್ಕದಂತಹ ಸೌಲಭ್ಯಗಳು ಇರುವುದರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ರೋಗಿಗಳಿಗೆ ಇಲ್ಲಿ ತಲುಪುವುದು ಸುಲಭವಾಗುತ್ತದೆ. ಇನ್ನೊಂದೆಡೆ, ಕಾರವಾರದಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸೌಲಭ್ಯಗಳು ಇರುವುದನ್ನು ಸರ್ಕಾರದ ವಾದವಾಗಿ ಉಲ್ಲೇಖಿಸಲಾಗುತ್ತಿದೆ. ಆದರೆ, ಕೇವಲ ಕಟ್ಟಡಗಳ ನಿರ್ಮಾಣದಿಂದಲೇ ಆರೋಗ್ಯ ಸೇವೆ ಪರಿಣಾಮಕಾರಿಯಾಗುವುದಿಲ್ಲ ಎಂಬುದೂ ವಾಸ್ತವ. ತಜ್ಞ ವೈದ್ಯರ ಕೊರತೆ ಹಾಗೂ ಸೇವಾ ವ್ಯವಸ್ಥೆಯ ಬಲವರ್ಧನೆ ಕೂಡ ಸಮಾನವಾಗಿ ಗಮನಿಸಬೇಕಾದ ಅವಶ್ಯಕತೆ ಇದೆ.

ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಸ್ಥಳವನ್ನು ಆಯ್ಕೆ ಮಾಡುವಾಗ ಕೇವಲ ಆಡಳಿತಾತ್ಮಕ ನಿರ್ಧಾರವಷ್ಟೇ ಅಲ್ಲದೆ, ಜಿಲ್ಲೆಯ ಜನರ ಅನುಕೂಲತೆ, ಭೌಗೋಳಿಕ ಸಮತೋಲನ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ, ಜಿಲ್ಲೆಯ ಜನ  ಇಂದು ಉತ್ತಮ ಆರೋಗ್ಯ ಸೇವೆಯ ನಿರೀಕ್ಷೆಯಲ್ಲಿದ್ದಾರೆ. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಮಂಗಳೂರು, ಮಣಿಪಾಲ, ಹುಬ್ಬಳ್ಳಿ ಅಥವಾ ಗೋವಾ ಕಡೆಗೆ ಹೋಗುವ ಅನಿವಾರ್ಯತೆ ಇನ್ನೂ ಮುಂದುವರಿಯುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರಯನ್ನ ಸರಕಾರ ಘೋಷಣೆ ಮಾಡಿದೆ.

ಆದ್ದರಿಂದ ಈ ಮಹತ್ವದ ಯೋಜನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಸರ್ಕಾರ ಜಿಲ್ಲೆಯ ಸಮಗ್ರ ಹಿತವನ್ನು ಗಮನಿಸಬೇಕು. ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಮಧ್ಯಭಾಗದಲ್ಲಿರುವ ಸ್ಥಳವನ್ನು ಪರಿಗಣಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜನರ ಆರೋಗ್ಯದ ಭವಿಷ್ಯವನ್ನು ನಿರ್ಧರಿಸುವ ಈ ಯೋಜನೆ ರಾಜಕೀಯ ವಾದ–ವಿವಾದಗಳ ವಿಷಯವಾಗದೇ, ಜನಹಿತದ ದೃಷ್ಟಿಯಿಂದ ರೂಪುಗೊಳ್ಳಬೇಕಾಗಿದೆ.

ಇದನ್ನೂ ಓದಿ/ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ನಿಲ್ಲಿಸಿ..! ಮಾಸ್ತಪ್ಪ ನಾಯ್ಕ‌ರಿಗೆ ಕಾಂಗ್ರೇಸ್ ಎಚ್ಚರಿಕೆ