ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ನಕಲಿ ಫೇಸ್ಬುಕ್ ಖಾತೆಗಳನ್ನು ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹರಡುವವರಿಗೆ ನಾನು ಯಾವತ್ತೂ ಹೆದರುವುದಿಲ್ಲ. ನನಗೆ ಭಯವಿರುವುದು ಕ್ಷೇತ್ರದ ಜನರು, ದೇವರು ಮತ್ತು ಗುರುಗಳ ಬಗ್ಗೆ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದರು.
ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಕಲಿ ಫೇಸ್ಬುಕ್ ಖಾತೆ ನಡೆಸುವವರ ಬಣ್ಣವನ್ನು ದಾಖಲೆಗಳೊಂದಿಗೆ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು.
ಹೋರಾಟದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುವುದು ಒಳ್ಳೆಯದಲ್ಲ..ಒಳ್ಳೆಯದು ಆಗೋದು ಇಲ್ಲ. ಈ ಯೋಜನೆಗೆ ಐದು ಲಕ್ಷಕ್ಕೂ ಹೆಚ್ಚು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ರಾಜಕೀಯ ಉದ್ದೇಶದಿಂದ ನಡೆಸಿದ ಪತ್ರಚಳುವಳಿಗೆ 20–30 ಜನರಷ್ಟೇ ಬೆಂಬಲ ನೀಡಿದ್ದಾರೆ.
ಈ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ನಾನು ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಬಳಿ ಹೋಗಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇನೆ. ಇಂದಿಗೂ ಈ ಯೋಜನೆಗೆ ನನ್ನ ವಿರೋಧ ಮುಂದುವರಿದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಬೇರೆಯವರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಇಂದು ಒಂದು ಊರು, ನಾಳೆ ಮತ್ತೊಂದು ಊರು ಅಲೆದಾಡಿಕೊಂಡು ಇರೋದು ಯಾವುದೇ ಲೆಕ್ಕಕ್ಕೂ ಬರುವುದಿಲ್ಲ. ಇದರಲ್ಲಿ ಏನಾದರೂ ಲಾಭ ಸಿಗಬಹುದು ಎಂದು ಅವರು ಬಂದಿರಬಹುದು. ಆದರೆ ಅವರು ಊಹಿಸಿದಂತೆ ಯಾವುದೇ ಲಾಭ ಸಿಗುವುದಿಲ್ಲ. ಸಭೆಯ ಅಂತ್ಯದಲ್ಲಿ ಸಚಿವರು ನೇರವಾಗಿ ಮಾಸ್ತಪ್ಪ ನಾಯ್ಕ ಅವರ ಹೆಸರನ್ನು ಉಲ್ಲೇಖಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರ ಈ ಹೇಳಿಕೆ ಕೇಳಿದ ಸಭೆಯಲ್ಲಿ ಇದ್ದ ಕೆಲವರು, ನಕಲಿ ಫೇಸ್ಬುಕ್ ಖಾತೆಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವವರು ಮಾಸ್ತಪ್ಪ ನಾಯ್ಕರೇ ಇರಬಹುದೆಂದು ಪರಸ್ಪರ ಚರ್ಚಿಸಿಕೊಳ್ಳುತ್ತಿರುವುದು ಕೇಳಿಬಂತು.
ಇದನ್ನೂ ಓದಿ/ಸಿಲಿಂಡರ್ ಬುಕ್ಕಿಂಗ್ ದಿಢೀರ್ ಬದಲಾವಣೆ : ಈಗ 25 ದಿನ ಕಾಯಲೇಬೇಕು…!!!


