ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಇಲ್ಲಿನ ದುಬ್ಬನ ಸಶಿ ಸಮುದ್ರ ತೀರದಲ್ಲಿ ಹೋಮ್ಸ್ಟೇ ಹಾಗೂ ಪ್ರವಾಸೋದ್ಯಮ ವ್ಯವಹಾರ ನಡೆಸುತ್ತಿರುವವರಿಗೆ ತಹಶೀಲ್ದಾರ್ ಕಚೇರಿಯಿಂದ ಏಕಾಏಕಿ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಮೀನುಗಾರರು ಹಾಗೂ ಸ್ಥಳೀಯರು ಹಠಾತ್ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ನೋಟಿಸ್ ನೀಡಿರುವ ಕ್ರಮದಿಂದ ಆತಂಕಗೊಂಡ ಮೀನುಗಾರರು ಮತ್ತು ಹೋಮ್ಸ್ಟೇ ಮಾಲೀಕರು ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿ ಅಧಿಕಾರಿಗಳ ಒತ್ತಡ ತಂತ್ರದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿರು. ಈ ಬೀಚ್ನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ಮೀನುಗಾರರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಧಿವೇಶನದಲ್ಲಿ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಜಿಲ್ಲೆಯ ಇತರೆ ಸಮುದ್ರ ತೀರ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿರುವುದಾಗಿ ಅವರು ಹೇಳಿದರು. ಈ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಿಸಿದವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿರುವುದಾಗಿ ತಿಳಿಸಿದರು.
ನ್ಯಾಯಾಲಯದಲ್ಲಿ ಪ್ರಕರಣ
ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರದೀಪ ನಾಯಕ,ದುಬ್ಬನ ಸಶಿ ತೆರವು ಪ್ರಕರಣ ಧಾರವಾಡ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಸೋಮವಾರ ಮತ್ತು ಮಂಗಳವಾರ ಕೂಡ ವಿಚಾರಣೆ ನಿಗದಿಯಾಗಿದೆ ರವಿವಾರವೂ ವಿಚಾರಣೆ ನಡೆಸಿದ ನ್ಯಾಯಾಲಯ, ನೋಟಿಸ್ ಪಡೆದ ಹೆಚ್ಚಿನವರಿಗೆ ತಾತ್ಕಾಲಿಕ ತಡೆ ಆದೇಶ ನೀಡಿದ್ದು ಪ್ರಕರಣವನ್ನು ಆರು ತಿಂಗಳವರೆಗೆ ಮುಂದೂಡಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ/ಜೇನುಕಲ್ಲು ಗುಡ್ಡದಿಂದ ಜಿಗಿದು ಧಾರವಾಡ ಮೂಲದ ಯುವಕ ಆತ್ಮಹತ್ಯೆ



