ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಸಮೀಪದ ಜೇನುಕಲ್ಲು ಗುಡ್ಡದಿಂದ ಪ್ರಪಾತಕ್ಕೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಯುವಕ ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರ ಕಂಪ್ಲಿ ಬಸವೇಶ್ವರ ನಗರದ ನಿವಾಸಿಯಾದ ಶ್ರೀನಿಧಿ ಕೃಷ್ಣಾ ಕಡಕೋಳ (23) ಎಂದು ಗುರುತಿಸಲಾಗಿದೆ. ಈತ ಮಾ.4ರಂದು ಗೋಕರ್ಣಕ್ಕೆ ಹೋಗಿ ಬರುತ್ತೇನೆಂದು ಹೇಳಿ ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದನು. ಆದರೆ ಬಳಿಕ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ನಂತರ ನಿನ್ನೆ ಶನಿವಾರ ಯಲ್ಲಾಪುರ ತಾಲೂಕಿನ ಮಾಗೋಡು ಪ್ರದೇಶದ ಜೇನುಕಲ್ಲು ಗುಡ್ಡದ ಕೆಳಭಾಗದಲ್ಲಿ ಅವನ ಮೃತದೇಹ ಪತ್ತೆಯಾಗಿದೆ.

ಯುವಕ ಮೇಲಿನಿಂದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಗುಡ್ಡದಿಂದ ಹೊರತೆಗೆದಿದ್ದಾರೆ.
ಈ ಸಂಬಂಧ ಮೃತನ ತಂದೆ ಕೃಷ್ಣ ಶ್ರೀನಿವಾಸ ಕಡಕೋಳ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಓದಿ/9ನೇ ತರಗತಿ ವಿದ್ಯಾರ್ಥಿಯಿಂದ 9 ವಿದ್ಯಾರ್ಥಿಗಳ ಮೇಲೆ ಹಲ್ಲೆ : ಓರ್ವ ಸಾವು