ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಮಾಜಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಬಿಜೆಪಿಗೆ ಮರಳಲಿದ್ದಾರೆ ಎನ್ನುವ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ಅವರು ಯಾವತ್ತೂ ನಮ್ಮ ಜೊತೆಯಲ್ಲೇ ಇದ್ದಾರೆ. ಪಕ್ಷದಿಂದ ಅವರು ದೂರವಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.ಕಾರವಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಕೆಲ ವರ್ಷಗಳಿಂದ ರಾಜಕೀಯ ಮತ್ತು ಪಕ್ಷದ ಸಂಘಟನಾ ಚಟುವಟಿಕೆಗಳಿಂದ ದೂರವಿದ್ದ ಅವರು, ಇದೀಗ ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ. ಮಾರ್ಚ್ 8ರಂದು Bhatkalನಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಹೆಗಡೆ ಪ್ರಮುಖ ಭಾಷಣಕಾರರಾಗಿ ಭಾಗವಹಿಸುವ ಸಾಧ್ಯತೆ ಇದೆ. ತಮ್ಮ ರಾಜಕೀಯಕ್ಕೆ ಪ್ರಮುಖ ನೆಲೆಯಾಗಿದ್ದ ಭಟ್ಕಳದಲ್ಲಿಯೇ ಮತ್ತೆ ಕಾಣಿಸಿಕೊಳ್ಳಲಿದ್ದಾರೆನ್ನಲಾಗಿದೆ.
ಕಾರ್ಯಕ್ರಮದ ಆಯೋಜಕರು ಮತ್ತು ಸಂಘ ಪರಿವಾರದ ಕೆಲವು ನಾಯಕರು ಹೆಗಡೆ ಅವರನ್ನ ಭೇಟಿಯಾಗಿ ಹಲವು ಬಾರಿ ಮಾತುಕತೆ ನಡೆಸಿದ್ದರು. ಹಿರಿಯ ನಾಯಕರ ಮನವೊಲಿಕೆಗೆ ಸ್ಪಂದಿಸಿ ಅವರು ಈ ವೇದಿಕೆಗೆ ಬರಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಅವರ ರಾಜಕೀಯ ಪುನರಾಗಮನದ ಕುರಿತು ನಡೆಯುತ್ತಿದ್ದ ಊಹಾಪೋಹಗಳಿಗೆ ಈಗ ಮತ್ತಷ್ಟು ಬಲ ಬಂದಿದೆ.
ಭಟ್ಕಳದಲ್ಲಿ ಈಗಾಗಲೇ ಭರ್ಜರಿ ಸ್ವಾಗತದ ಸಿದ್ಧತೆಗಳು ನಡೆಯುತ್ತಿವೆ. ನಗರ ಪ್ರವೇಶದ ಬಳಿಕ ಕಾರ್ಯಕ್ರಮದ ಸ್ಥಳದವರೆಗೆ ರೋಡ್ ಶೋ ನಡೆಸುವ ಯೋಜನೆ ಇದೆ. ನೂರಕ್ಕೂ ಹೆಚ್ಚು ವಾಹನಗಳ ರ್ಯಾಲಿಯೊಂದಿಗೆ ಅವರನ್ನು ಬರಮಾಡಿಕೊಳ್ಳಲು ಆಯೋಜಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಗಡೆ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಚರ್ಚೆ ತೀವ್ರಗೊಂಡಿದ್ದರೂ, ಇದುವರೆಗೆ ಸ್ಪಷ್ಟ ಅಧಿಕೃತ ಘೋಷಣೆ ಇರಲಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆ, ಆ ಮಾತುಗಳಿಗೆ ಒಂದು ಮಟ್ಟಿಗೆ ದೃಢತೆ ನೀಡುತ್ತಿರುವಂತೆ ಕಾಣುತ್ತಿದೆ, ರಾಜ್ಯ ರಾಜಕೀಯದ ಚರ್ಚೆಗಳಿಗೆ ಹೊಸ ಆಯಾಮ ಸಿಗುವ ಸಾಧ್ಯತೆ ಇದೆ. ಅವರ ಮುಂದಿನ ಹೆಜ್ಜೆಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬುದನ್ನು ಕಾಲವೇ ತೋರಿಸಬೇಕಿದೆ.




