ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಮಲೆನಾಡಿನ ಧಾರ್ಮಿಕ ಸಂಸ್ಕೃತಿಗೆ ಹೆಸರಾದ ಶಿರಸಿ ನಗರ ಮಾರಿಕಾಂಬಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಜ್ಜಾಗಿದೆ. ನಗರದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ.
ದೇವಿ ಆಸೀನಳಾಗುವ ಬಿಡ್ತಿಬೈಲು ಪ್ರದೇಶದಲ್ಲಿ ಜಾತ್ರಾ ಗದ್ದುಗೆ ಹಾಗೂ ವಿಶಾಲ ಮಂಟಪ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಮಂಟಪವನ್ನು ದೀಪಾಲಂಕಾರಗಳಿಂದ ಅಲಂಕರಿಸಲಾಗುತ್ತಿದ್ದು, ಹಬ್ಬದ ರಂಗು ತುಂಬಿಕೊಂಡಿದೆ. ದೇವಸ್ಥಾನ ಆಡಳಿತ ಮಂಡಳಿ ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಿದ್ಧತೆಗಳಲ್ಲಿ ತೊಡಗಿಕೊಂಡಿದೆ. ಜಾತ್ರಾ ಮೈದಾನದಲ್ಲಿ ಅಂಗಡಿ-ಮುಂಗಟ್ಟುಗಳ ತೆರೆದುಕೊಂಡಿದೆ, ವಿವಿಧ ಭಾಗಗಳಿಂದ ಬಂದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಅಣಿಗೊಳಿಸುತ್ತಿದ್ದಾರೆ. ಮನರಂಜನಾ ಆಟೋಪಕರಣಗಳ ಜೋಡಣೆಯೂ ನಡೆಯುತ್ತಿದೆ.
ನಾಳೆ ಬೆಳಿಗ್ಗೆ ನಡೆಯಲಿರುವ ದೇವಿಯ ರಥೋತ್ಸವಕ್ಕೆ ಭಕ್ತರಲ್ಲಿ ವಿಶೇಷ ಉತ್ಸಾಹ ಕಂಡುಬರುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿ ರಥ ನಿರ್ಮಾಣ ತಯಾರಿ ಕಾರ್ಯ ಜೋರಾಗಿದ್ದು, ಸಾಂಪ್ರದಾಯಿಕ ವಿಧಾನದಲ್ಲಿ ಮರದ ಭಾಗಗಳನ್ನು ಜೋಡಿಸಿ ರಥಕ್ಕೆ ಅಲಂಕಾರ ನೀಡಲಾಗುತ್ತಿದೆ. ವಿವಿಧ ಹಳ್ಳಿಗಳಿಂದ ತರಲಾದ ಮರದ ಸಾಮಗ್ರಿಗಳನ್ನು ಬಳಸಿಕೊಂಡು ರಥದ ಶಿಖರವನ್ನು ಸುಂದರವಾಗಿ ರೂಪಿಸಲಾಗುತ್ತಿದ್ದು, ಬಣ್ಣಬಣ್ಣದ ಧ್ವಜಪತಾಕೆಗಳು ರಥದ ಭವ್ಯತೆಯನ್ನು ಹೆಚ್ಚಿಸಿವೆ. ರಥದ ಭದ್ರತೆಗಾಗಿ ನುರಿತ ಬಡಗಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಾತ್ರೆಗೆ ಬರುವ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ದರ್ಶನ ಮಾರ್ಗಗಳನ್ನು ಒದಗಿಸಲಾಗಿದೆ. ತುರ್ತು ಸಂದರ್ಭಗಳಿಗೆ ನಿರ್ಗಮನ ದ್ವಾರಗಳನ್ನೂ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ವಯಂಸೇವಕರ ಮೂಲಕ ಕಲ್ಪಿಸಲಾಗಿದೆ.. ಜಾತ್ರಾ ಮೈದಾನದ ಸುತ್ತಮುತ್ತ ಅಗ್ನಿಶಾಮಕ ದಳ, ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದ ನಗರದಲ್ಲಿನ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಲಕ್ಷಾಂತರ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದೆ.
ನಗರದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನಗರಸಭೆ ವತಿಯಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ತ್ಯಾಜ್ಯ ವಿಲೇವಾರಿ ಮತ್ತು ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ನಸುಕಿನ ಜಾವದಿಂದ ಕೇಂದ್ರೀಯ ಬಸ್ ನಿಲ್ದಾಣದ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದ್ದು, ಎಲ್ಲಾ ಬಸ್ಗಳನ್ನು ಗಣೇಶನಗರದ ಬಳಿಯ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲಾಗಿದ್ದು, ನಗರ ಒಳಭಾಗಕ್ಕೆ ತೆರಳುವವರಿಗೆ ಕೆಲ ಪ್ರಮುಖ ಸ್ಥಳಗಳಲ್ಲಿ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವ ಕೆಲಸವೂ ನಡೆಯುತ್ತಿದೆ.



