ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಫೈರ್ಬ್ರ್ಯಾಂಡ್ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ವದಂತಿಯಲ್ಲ, ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಎದುರಿಸುತ್ತಿರುವ ನಾಯಕತ್ವದ ಗೊಂದಲ ಹಾಗೂ ದಿಕ್ಕು ತಪ್ಪಿದ ಬಿಜೆಪಿಗೆ ಸಂಘಪರಿವಾರ ಅನಂತಕುಮಾರ ಹೆಗಡೆ ಅವರನ್ನ ಕರೆತರಲು ಸಂಘ ಪರಿವಾರ ಮುಂದಾಗಿದೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಬಿಜೆಪಿ ಹೋರಾಟದ ರಾಜಕಾರಣದಿಂದ ದೂರ ಸರಿದು, ಸಂಧಾನ ಮತ್ತು ಮೃದು ರಾಜಕಾರಣದಲ್ಲಿ ಸಿಲುಕಿದೆ ಎಂಬ ಆರೋಪಗಳು ಪಕ್ಷದೊಳಗಿಂದಲೇ ಕೇಳಿಬರುತ್ತಿವೆ. ಒಮ್ಮೆ ಹೋರಾಟದ ಮೂಲಕ ರಾಜಕೀಯ ನೆಲೆ ಕಟ್ಟಿಕೊಂಡಿದ್ದ ಪಕ್ಷದಲ್ಲಿ ಇಂದು ಹೋರಾಟದ ಧ್ವನಿ ಕುಗ್ಗಿದೆ ಎಂಬ ಅಸಮಾಧಾನ ಕಾರ್ಯಕರ್ತರ ವಲಯದಲ್ಲಿ ಗಟ್ಟಿಯಾಗುತ್ತಿದೆ. ಪ್ರಸ್ತುತ ನಾಯಕತ್ವದ ಶೈಲಿ ಮತ್ತು ಪಕ್ಷದ ಸ್ಥಿತಿಯನ್ನು ನೋಡಿದರೆ, ಇನ್ನೂ ಕನಿಷ್ಠ ಎರಡು-ಮೂರು ಅವಧಿಗೆ ಬಿಜೆಪಿ ಅಧಿಕಾರದ ಹತ್ತಿರಕ್ಕೂ ಸುಳಿಯುವ ಸಾಧ್ಯತೆ ಕಡಿಮೆ ಎಂಬ ನಿರಾಸೆಯ ಭಾವನೆ ಕಾರ್ಯಕರ್ತರಲ್ಲಿದೆ.
ಹಿಂದುತ್ವದ ರಾಜಕಾರಣಕ್ಕೆ ಸ್ಪಷ್ಟ ದಿಕ್ಕು ನೀಡಿದ್ದ ಪಕ್ಷ, ಇಂದು ಸಾಫ್ಟ್ ಮತ್ತು ಸಂಧಾನದ ರಾಜಕಾರಣದಲ್ಲಿ ಸಿಲುಕಿರುವುದು ಸಂಘ ಪರಿವಾರದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸಂಘ ಪರಿವಾರ ತನ್ನ ನೀಲಿ ಕಣ್ಣಿನ ಹುಡುಗ (Blue Eye Boy) ಎಂದೇ ಗುರುತಿಸಿಕೊಂಡಿರುವ ಗಟ್ಟಿ ಹಿಂದು ಧ್ವನಿಯ ಅನಂತಕುಮಾರ್ ಹೆಗಡೆಯವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ತನ್ನ ಶಿಷ್ಯನನ್ನು ಬಿಜೆಪಿ ನಡೆಸಿಕೊಂಡ ರೀತಿ ಬಗ್ಗೆ ಸಂಘ ಪರಿವಾರಕ್ಕೆ ತೀವ್ರ ಅಸಮಾಧಾನವಿದ್ದು, ಬೊಮ್ಮಾಯಿ ಅವರಂಥ ಸೆಕ್ಯುಲರ್ ಚಿಂತನೆಯ ನಾಯಕನಿಗೆ ಸಿಎಂ ಸ್ಥಾನ ನೀಡಿದ ಪರಿಣಾಮ ಈ ಸ್ಥಿತಿಗೆ
ತಲುಪಿದೆ ಎಂಬ ನೋವು ಸಂಘದ ವಲಯದಲ್ಲಿ ಇನ್ನೂ ಜೀವಂತವಾಗಿದೆ.
ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ಕೇಂದ್ರ ನಾಯಕತ್ವವೂ ಗೊಂದಲದಲ್ಲಿದ್ದು ಮೌನ ವಹಿಸಿರುವುದು ಗಮನಾರ್ಹ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ‘ಯಡ್ಡಿ ಕ್ರಾಂತಿ’ ಮಾಡಿದೆ ಎಂದು ಬಿಗಿದ್ದ ಸಂತೋಷ್ ಜೀ, ಚುನಾವಣಾ ಸೋಲಿನ ನಂತರ ರಾಜ್ಯ ರಾಜಕಾರಣದಿಂದ ದೂರ ಸರಿದು ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಆಗಿದ್ದಾರೆ. ‘ಯಡ್ಡಿ ಕ್ರಾಂತಿ’ಯ ಮತ್ತೊಬ್ಬ ಮಾಸ್ಟರ್ಮೈಂಡ್ ಪ್ರಹ್ಲಾದ್ ಜೋಶಿಯವರ ಸಾಮರ್ಥ್ಯವೂ ಈಗಾಗಲೇ ಬಹಿರಂಗವಾಗಿದೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿವೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತರಾಗಿದ್ದು, ರಾಜ್ಯ ಬಿಜೆಪಿ ಮನೆಯೊಂದು ನೂರು ಬಾಗಿಲಿನಂತಾಗಿದೆ ಎಂಬ ವ್ಯಂಗ್ಯಗಳು ಹರಿದಾಡುತ್ತಿವೆ.
ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ, ಭಟ್ಕಳ ಗಲಭೆ ಸೇರಿದಂತೆ ಹಲವು ಹಿಂದುಪರ ಹೋರಾಟಗಳ ಮೂಲಕ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಕಲ್ಪಿಸಿದ್ದವರು ಅನಂತಕುಮಾರ್ ಹೆಗಡೆ ಎಂಬುದನ್ನು ಅವರ ವಿರೋಧಿಗಳೂ ಇಂದಿಗೂ ಅಲ್ಲಗಳೆಯುವುದಿಲ್ಲ. ಹಿಂದುತ್ವದ ಗಟ್ಟಿ ಧ್ವನಿ ಹಾಗೂ ಮೊನಚಾದ ಮಾತುಗಾರಿಕೆಯಿಂದ ಅವರು ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವೆಡೆ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಂಘದ ಕಟ್ಟಾಳು ಆಗಿರುವ ತನ್ನ ಶಿಷ್ಯನನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತಂದು, ರಾಜ್ಯದಲ್ಲಿ ಹಿಂದುತ್ವದ ಧ್ವನಿಯನ್ನು ಗಟ್ಟಿಗೊಳಿಸುವ ಮೂಲಕ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಸುವುದು ಸಂಘ ಪರಿವಾರದ ತಂತ್ರವಾಗಿದೆ ಎನ್ನಲಾಗುತ್ತಿದೆ. ಆರ್.ಎಸ್.ಎಸ್ ಸಂಘಚಾಲಕರಾಗಿರುವ, ರಾಜ್ಯದವರೇ ಆದ ದತ್ತಾತ್ರೇಯ ಹೊಸಬಾಳೆ ಈ ಕಾರ್ಯತಂತ್ರಕ್ಕೆ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ್ ಸೇರಿದಂತೆ ಹಿಂದುತ್ವದ ಪರ ಗಟ್ಟಿ ಧ್ವನಿಯ ನಾಯಕರನ್ನು ಕಣಕ್ಕಿಳಿಸುವುದು, ಪಕ್ಷ ಬಿಟ್ಟಿರುವ ಯತ್ನಾಳ, ಈಶ್ವರಪ್ಪ ಮುಂತಾದವರನ್ನು ಮರಳಿ ಪಕ್ಷಕ್ಕೆ ಕರೆತರುವ ಚಿಂತನೆಯೂ ನಡೆಯುತ್ತಿದೆ ಎನ್ನಲಾಗಿದೆ.
ಅನಂತಕುಮಾರ್ ಹೆಗಡೆ ತಟಸ್ಥರಾಗಿದ್ದ ಕಾರಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಕಳೆದುಕೊಂಡಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮುಂದಿಟ್ಟುಕೊಂಡು ರಾಜಕೀಯ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಪಕ್ಷದ ಪ್ರತಿ ಕಾರ್ಯಕರ್ತನಿಗೂ ತಿಳಿದಿರುವ ಸತ್ಯ. ಈಗಾಗಲೇ ಶಾಸಕ, ಸಚಿವ, ಸ್ಪೀಕರ್ ಹಾಗೂ ಸಂಸದ ಹುದ್ದೆಗಳನ್ನು ನಿರ್ವಹಿಸಿರುವ ಕಾಗೇರಿಯವರನ್ನು ಈ ಅವಧಿಯ ನಂತರ ಚುನಾವಣಾ ಕಣದಿಂದ ದೂರವಿಟ್ಟು ‘ಮಾರ್ಗದರ್ಶಕ ಮಂಡಲ’ಕ್ಕೆ ಕೂರಿಸುವ ಪ್ರಯತ್ನವೂ ನಿಧಾನವಾಗಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಜಿಲ್ಲೆಯ ಕರಾವಳಿಯ ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಅನಂತಕುಮಾರ್ ಹೆಗಡೆಯನ್ನು ಕಣಕ್ಕಿಳಿಸಿ, ಆ ಮೂಲಕ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಕೇಸರಿ ಪತಾಕೆಯನ್ನು ಮತ್ತೆ ಎತ್ತಿಹಿಡಿಯುವದು ಸಂಘ ಪರಿವಾರದ ಪ್ರಮುಖ ಗುರಿಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದೆ.
ಇದನ್ನೂ ಓದಿ/ಸುಚಿತ್ರ ಸೌಂದರ್ಯಕ್ಕೆ ಸೋತ ಜ್ಯೋತಿಷಿ..? ಮೊದಲ ಭೇಟಿಯಲ್ಲೇ 35 ಸಾವಿರ ಸುರಿದ ಕಮಲಾಕರ ಭಟ್..!


