ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಸಚಿವರಾದ ಪ್ರಿಯಾಂಕ ಖರ್ಗೆ ಕೇವಲ ಪ್ರಚಾರದ ತೆವಲಿಗಾಗಿ ಹಾಗೂ ರಾಜಕೀಯ ಮಹತ್ವಾಕಾಂಕ್ಷೆಯಿಂದ ಆರ್ ಎಸ್ ಎಸ್ ನಿಷೇಧಿಸುವ ಮಾತುಗಳನ್ನಾಡಿದ್ದಾರೆ. ರಾಜ್ಯ ಸರ್ಕಾರ ಆರ್ ಎಸ್ ಪಥ ಸಂಚಲನಕ್ಕೆ ಅವಕಾಶ ನಿರಾಕರಿಸುತ್ತಿದೆ. ಗಣವೇಷಧಾರಿ ನೌಕರರ ಮೇಲೆ  ಕ್ರಮ ಕೈಗೊಳ್ಳುತ್ತಿದೆ. ದೇಶಭಕ್ತಿ, ದೇಶಸೇವೆ ಮಾಡುವ ಆರ್ ಎಸ್ ಎಸ್ ಮೇಲೆ ಕ್ರಮ ಕೈಗೊಂಡು ದೇಶದ್ರೋಹಿಗಳಿಗೆ ಕಾಂಗ್ರೆಸ್ ಸರ್ಕಾರ ಮಣೆ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆರ್ ಎಸ್ ಎಸ್ ನಿಷೇಧಿಸುವ ಸಚಿವರಾದ ಪ್ರಿಯಾಂಕ ಖರ್ಗೆಅವರ ಹೇಳಿಕೆ ಖಂಡನೀಯ.ಹಾಗೆ ಪಥ ಸಂಚಲನಕ್ಕೆ ಅನುಮತಿ ನೀಡದಿರುವುದು, ಗಣವೇಷಧಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವುದು ಸಹ ಖಂಡನೀಯ ಎಂದು ಅವರು ತಿಳಿಸಿದ್ದಾರೆ.ಆರ್ ಎಸ್ ಎಸ್  ನೂರು ವರ್ಷಗಳಿಂದ ಈ ದೇಶಕ್ಕಾಗಿ, ದೇಶಸೇವೆಗಾಗಿ ತನ್ನನ್ನು ಮುಡಿಪಾಗಿಟ್ಟಿದೆ. ಈ ನೂರು ವರ್ಷಗಳಲ್ಲಿ ಆರ್ ಎಸ್ ಎಸ್ ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಿದೆ. ಆರ್ ಎಸ್ ಎಸ್ ಮಣಿಸಲು ಹಿಂದೆ ಕಾಂಗ್ರೆಸ್ಸಿನ ಘಟಾನುಘಟಿಗಳು ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಿಲ್ಲ. ಈಗ ಪ್ರಿಯಾಂಕ ಖರ್ಗೆ ಹೈಕಮಾಂಡ್ ಗಮನ ಸೆಳೆಯಲೋ ಅಥವಾ ಇಂತಹ ಹೇಳಿಕೆಗಳಿಂದ ತಾವೊಬ್ಬ ಮಹಾನ್ ನಾಯಕರಾಗಿ ಬಿಡಬಹುದು ಎಂಬ ಭ್ರಮೆಯಿಂದ ಹೇಳಿಕೆ ಕೊಟ್ಟಿದ್ದಾರೆ. ವಿಪರ್ಯಾಸ ಎಂದರೆ ಹಾಗೆ ಹೇಳಿಕೆಕೊಟ್ಟ ಪ್ರಿಯಾಂಕ ಖರ್ಗೆ ಈಗ ಪಕ್ಷದಲ್ಲೇ ಏಕಾಂಗಿಯಾಗಿದ್ದಾರೆ.

ಸಮಾಜಸೇವೆ ಹಾಗೂ ದೇಶಸೇವೆಗೆ ಆರ್ ಎಸ್ ಎಸ್  ಒಂದು ಮಾದರಿ. ಇಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸಲು ಕಾಂಗ್ರೆಸ್ಸಿಗರು ಮುಂದಾಗುತ್ತಾರೆ. ನಮ್ಮ ನೆಲದಲ್ಲಿ ನಿಂತು ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಓಲೈಕೆ ಮಾಡುತ್ತಾರೆ. ಕಾಂಗ್ರೆಸ್ ನ ನಿಜವಾದ ಬಣ್ಣ ಈಗ ಬಯಲಾಗಿದೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಾಮಾಜಿಕವಾಗಿ ಸಂಕಷ್ಟದ ಸಂದರ್ಭಗಳು ಎದುರಾದಾಗ, ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಮಾನವೀಯ ನೆರವು ನೀಡಿದೆ. ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನಿಟ್ಟುಕೊಂಡು ಈ ದೇಶದ ಏಕತೆಗಾಗಿ, ನಮ್ಮ ಸಂಸ್ಕೃತಿ ರಕ್ಷಣೆಗಾಗಿ ಅವಿರತವಾಗಿ ದುಡಿಯುತ್ತಿದೆ. ಪ್ರಿಯಾಂಕ ಖರ್ಗೆ ಅವರೇ ಇಂತಹ ಉದಾತ್ತ ಮನೋಭಾವ ಇರುವ ಆರ್ ಎಸ್ ಎಸ್ ಅನ್ನು ನಿಷೇಧಿಸುವ ಮಾತುಗಳನ್ನಾಡುವ ಮೂಲಕ ಏನನ್ನು ಸಾಧಿಸಲು ಹೊರಟಿದ್ದೀರಿ. ದೇಶಸೇವೆ, ಸಮಾಜಸೇವೆ ಮಾಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಕ್ರಮ ಕೈಗೊಂಡರೆ, ಅಂತಹ ಮಾತುಗಳನ್ನಾಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆ ಸಿಗಬಹುದು ಎಂಬ ಭಾವನೆ ಕಾಂಗ್ರೆಸ್ ನ ಈ ಮುಖಂಡರದ್ದಾಗಿದೆ ಎಂದು ರೂಪಾಲಿ ಎಸ್.ನಾಯ್ಕ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ/ಶಾಲಾ ಮೈದಾನದಲ್ಲಿ ವ್ಯಕ್ತಿ ಓರ್ವನ ಶವ ಪತ್ತೆ