ಸುದ್ದಿಬಿಂದು ಬ್ಯೂರೋ
ಕುಮಟ
: ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಬದಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅನುಮತಿ ಇಲ್ಲದೆ ಬಸ್ ಬುಕ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ 78ಮಂದಿ ವಿರುದ್ಧ ಇದೀಗ ಕುಮಟ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಮೇ 10ರಂದು ನಡೆದ ವಿಧಾನಸಭೆ ಚುನಾವಣೆಗಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಗೆ ಮೇ 3ರಂದು ಆಗಮಿಸಿದ್ದರು. ಈ ವೇಳೆ ಮೋದಿ ಅವರ ಕಾರ್ಯಕ್ರಮಕ್ಕೆ ಹೋಗಲು ಕುಮಟ ಕ್ಷೇತ್ರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಿಂದಲ್ಲೂ ಜನರನ್ನ ಕರೆದುಕೊಂಡು ಹೋಗಲು ಬಸ್ ಬುಕ್ ಮಾಡಲಾಗಿತ್ತು. ಈ ವೇಳೆ ಚುನಾವಣೆ‌ ನೀತಿಸಂಹಿತೆ ಜಾರಿಯಲ್ಲಿ ಇದ್ದರೂ ಕೂಡ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯದೆ.ಬಸ್ ಬುಕ್ ಮಾಡಿ ಕಾರ್ಯಕ್ರಮಕ್ಕೆ ಸಾವಿರಾರು ಜನರನ್ನ ಕರೆದುಕೊಂಡು ಹೋಗಲಾಗಿತ್ತು.

ಅಂದೆ ಚುನಾವಣಾ ಸಮಯದಲ್ಲೆ‌ ಈ ಕುರಿತು ಪ್ರಕರಣ ದಾಖಲಾಗಬೇಕಿತ್ತು ಎ‌ನ್ನಲಾಗಿದ್ದು, ಆದರೆ‌ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಆಗಿದ್ದರೂ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಇದೀಗ ಚುನಾವಣಾಧಿಕಾರಿ ಅವರ ನಿರ್ದೇಶನದ ಮೇಲೆ ಕುಮಟ ತಾಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ನಾಗರತ್ನ ನಾಯಕ ಅವರು ಬಿಜೆಪಿಯ 78ಕಾರ್ಯಕರ್ತರು ಹಾಗೂ ಪ್ರಮುಖರ ವಿರುದ್ಧ ಕುಮಟ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.