ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ : ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರು ರಾಧಾ ಹೀರೆ ಗೌಡ ಅವರನ್ನ ಅಪಮಾನಿಸಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ದೇಶಪಾಂಡೆ ಅವರ ಪರವಾಗಿ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ..
ಕಳೆದ ಕೆಲ ದಿನಗಳ ಹಿಂದೆ ಸೂಫಾ ಜಲಾಶಯದಲ್ಲಿ ಬಾಗಿನ ಅರ್ಪಿಸುವ ವೇಳೆ ಗ್ಯಾರಂಟಿ ನ್ಯೂಸ್ನ ಸಂಪಾದಕಿಯಾಗಿರುವ ರಾಧ ಹಿರೇಗೌಡರ್ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಲ್ಲ ಹಾಗೂ ಹೆರಿಗೆ ಆಸ್ಪತ್ರೆ ಕೂಡ ಸರಿಯಾಗಿಲ್ಲ. ನಿಮ್ಮ ಅವಧಿಯಲ್ಲಾದ್ದರೂ ಒಂದ ಆಸ್ಪತ್ರೆ ಮಾಡಿ ಸರ್ ಅಂತಾ ಕೇಳಿದ್ದರು. ಅದಕ್ಕೆ ಹಿರಿಯ ರಾಜಕಾರಣಿ ಆರ್ ವಿ ದೇಶಪಾಂಡೆ ಅವರು ಹೆರಿಗೆ ಮಾಡಸ್ತಿನಿ ಅಂತಾ ಹೇಳಿರುವ ಹೇಳಿಕೆ ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು. ಈ ಬಗ್ಗೆ ರಾಜ್ಯದ ಹಲವೆಡೆ ಪ್ರತಿಭಟನೆ ಕೂಡ ನಡೆದಿದ್ದು, ಇವರ ಆ ಹೇಳಿಕೆಯಿಂದಾಗಿ ರಾಜ್ಯ ಕಾಂಗ್ರೇಸ್ ಸರಕಾರವೇ ಮುಜುಗರಕ್ಕೆ ಒಳಗಾಗುವಂತಾಗಿತ್ತು..
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು “ದೇಶಪಾಂಡೆ ಅವರು ನನ್ನ ಗುರುಗಳು. ಅವರು ಈ ಜಿಲ್ಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ. ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ರಾಜ್ಯದ ಹಿರಿಯ ಶಾಸಕರಾಗಿದ್ದಾರೆ. ಅವರು ಯಾಕೆ ಹಾಗೆ ಹೇಳಿದ್ದರು ಅಂತಾ ಗೊತ್ತಿಲ್ಲ. ಆ ರೀತಿ ಮಾತನಾಡುವವರು ಅವರು ಅಲ್ಲ, ಅವರ ಸ್ವಭಾವವೂ ಹಾಗಲ್ಲ. ಏನೋ ವ್ಯತ್ಯಾಸವಾಗಿದೆ ಎನ್ನಿಸುತ್ತದೆ. ಅವರ ಮಾತನ್ನು ನಾನು ಸಮರ್ಥಿಸುವುದಿಲ್ಲ, ಆದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ವಿಷಯವನ್ನು ಇಷ್ಟಕ್ಕೆ ಬಿಟ್ಟು ಬಿಡಿ,” ಎಂದು ಸಚಿವ ಮಂಕಾಳ್ ವೈದ್ಯ ಮನವಿ ಮಾಡಿದ್ದಾರೆ.
ಆಸ್ಪತ್ರೆ ವಿಚಾರವಾಗಿ ಮಾತ್ನಾಡಿದ ಸಚಿವ ಮಂಕಾಳ್ ವೈದ್ಯ ಅವರು “ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಕುರಿತು ಸರಕಾರ ಈಗಾಗಲೇ ಘೋಷಣೆ ಮಾಡಿದೆ. ಅದರೊಂದಿಗೆ ಮೆಡಿಕಲ್ ಕಾಲೇಜನ್ನೂ ಕೂಡ ಸ್ಥಾಪಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.

