…ದೂರದಲ್ಲಿ ಕಾಣುವ ಚಿತ್ರ ಅಲ್ಪ ಸ್ವಲ್ಪ ಮಂಜು ಮಂಜಾಗಿ ಕಂಡ್ರೂ ಕೂಡ ನನ್ದಂತು ೭೦ ದಾಟಿರುವಂಗಿದೆ ಬಿಡಿ…

ಈಗಿನ ಕಾಲದ ಮಕ್ಕಳಿಗೆ ೩೫_೪೦ ದಾಟಿದ್ದೆ ತಡಾ ಇಲ್ಲದ ಕಾಯಿಲೆ ಕಸಾಲೆ ಶುರುವಾದಂಗೆ..


ಅದ್ಯಾಂಗೋ ಅದ್ಯೇನ್ ತಿಂತ್ರೋ ಅದ್ಯೆಲ್ಲಿಂದ ಬರುತ್ತೋ ಇಲ್ಲಾ ಹಾಳಾದ ವಾತಾವರಣದಿಂದೋ ಒಂದು ಗೊತ್ತಾಗಕಿಲ್ಲ…

ಮೊನ್ನೆ ಮೊನ್ನೆಯಟೇ ನೀಲಮ್ಮ ಸಿಕ್ದಾಗ ಇದೇ ಮಾತು ಹೇಳಿದ್ರು ನೋಡಿ,,ಅಲಾ ಅವರ ಮಕ್ಕಳು ಇಟೇ ಸಣ್ಣಕವ್ರೆ ಈಗ್ಲೇ ಚಸ್ಮಾ ಹಾಕಂತ್ರಂತೆ,, ಕೆಲ ಮಕ್ಳಿಗೆ ಸಣ್ಣಕ್ಕಿರುವಾಗ್ಲೇ ಚಸ್ಮಾ ಬಂದು ಅದ ಹಾಕ್ಕಂತ ಇರುವಾಗ್ಲೇ ಪೊರೆ ಸಮಸ್ಯೆ ಬಂದ್ ಬಿಡುತ್ತಂತೆ.. ಇದ್ಯೆಂತಾ ಮಾರ್ರೆ ಕಣ್ಣು ಕೆಂಪಾಗಿ ಉರಿ ಆಗೋದು ಡಾಕ್ಟ್ರು ಹತ್ರ ಹೋದ್ರೆ ಪೊರೆ ಬಂದಿದೆ ಅಮ್ಮಾ ಪೊರೆ ತೆಗಿಬೇಕು ಅಂದ್ರಂತೆ…

ಅಲಾ ಎಂತ ಕಾಲ ಬಂತು ಅಂತಾ..
ಈ ಪೊರೆಗೆ ವಯಸ್ಸಿನ ಮಿತಿಯೂ ಇಲ್ವಾ ಅಂತಾ..
ಒಂದ್ ಕಣ್ಣಿಗೆ ಪೊರೆ ಬಂದಿದೆ ಅಂತಿಟ್ಕೊಳ್ಳಿ ಇನ್ನೊಂದು ಕಣ್ಣಿಗೆ ಅಜ್ಭಾತ್ ಪೊರೆ ನೇ ಇಲ್ಲ.. ಆದರೆ ಒಂದ್ ಕಣ್ಣಿಗೆ ಪೊರೆ ತೆಗೆದು ಆಫ್ರೇಷನ್ ಮಾಡಿದ ೩_೪ ತಿಂಗಳ ನಡುವೆಯೇ ಇನ್ನೊಂದು ಕಣ್ಣಿಗೂ ಆಫ್ರೇಷನ್ ಮಾಡಬೇಕಾಗುತ್ತೆ ಅಂತಾರಲ್ಲ..
ಇದಕ್ಕೆಲ್ಲಾ ಕಾರಣ ಎಂತದು ಎರಡು ಕಣ್ಣಿಗೆ ಹೊಂದಾಣಿಕೆ ಆಗೊಲ್ಲ ಅಂತಾನಾ.. ? ಎರಡು ಕಣ್ಣು ಸರಿ ಹೊಂದಿಸೋ ತಂತ್ರಜ್ಞಾನದ ತಜ್ಞ ವೈದ್ಯರ ಕೊರತೆ ಅಂತಾನಾ…? ಯಾ ಪಾಟಿ ಹೇಳ್ಬೇಕೋ ಗೊತ್ತಾಗುಕಿಲ್ಲಾ…

ಆಯ್ತು ಬಿಡಿ ನಾನಂತೂ ನಾಲ್ಕಕ್ಷರ ಕಲಿದೆಯ ಹೆಂಗೆಂಗೋ ಜೀವನದ ಜೀವ ತೇದ್ತಿದಿದೀನಿ ಬಿಡಿ…ಈ ನಮ್ಮ ಮೊಮ್ಮಕ್ಕಳಿಗಾದ್ರೂ ಡಾಕ್ಟ್ರಕೀ ಓದಿಸ್ಬ್ಕೇಕಾಗಿತ್ತು ಅಂತಾ ಮನಸ್ಸಲ್ಲೇ ಬೈಕೊಳ್ತಾ…
ತನ್ನ ಒಂದ್ ಕೈ ಮೇಲೆಕ್ಕೇರಿ ೫ (ಐದು)ಬೆರಳನ್ನ ನೇರ ಮಾಡಿ ಬಾಗಿದ ಹಣೆಗೆ ಅಡ್ಡಲಾಗಿ ಹಿಡಿದು ದೂರದಲ್ಲಿರೋದನ್ನ ಒಂದ್ ಮಟ್ಟಿಗೆ ಸರಿಯಾಗಿ ಗುರುತಿಸುವಂತಿದ್ದ ಸುಬ್ಬಮ್ಮನಿಗೆ ಗದ್ದೆ ಬಯಲಲ್ಲಿ ಕದಿರು ಹಿಡಿದು ಬರೋ ಆ ಇಬ್ಬರು ಮಕ್ಕಳ ಬಿಂಬಗಳು ಅಪೂರ್ಣವಾಗಿ ಕಾಣಿಸುತಿದ್ದವು.

ಮೊದಮೊದಲು ನನ್ನ ಮೊಮ್ಮಕ್ಕಳು ಒಂದು ಗಂಡು ಮತ್ತೊಂದು ಹೆಣ್ಣಲ್ಲವಾ ಅಂದುಕೊಂಡು ದಿಟ್ಟಿಸಿ ನೋಡುತ್ತಾ ಯೋಚಸಿದ ಸುಬ್ಬಮ್ಮನಿಗೆ ಆ ಚಡ್ಡಿಧಾರಿ ಮಕ್ಕಳು ಇಬ್ಬರೂ ಗಂಡೆನಿಸಿತು…ಆ ಮಕ್ಕಳೋ ಪಾಶ್ಚಾತ್ಯ ಸಂಸ್ಕೃತಿಯ ಕುಡಿಗಳಂತೆ ಲಿಂಗ ಸಮಾನತೆಗೆ ಹಿಡಿದ ದರ್ಪಣವೇನೋ ಎಂಬಂತೆ

ಚಡ್ಡಿ ಶರ್ಟ್ ಲಿ ಬರತಾ ಇರೋದು ಕಾಣಿಸಿತು..ಹಾದಿ ತಿಳಿಯದೇ ತಂತಿ ಬೇಲಿ ಹಾರಿ ತಣ್ಣನೆಯ ಗಾಳಿಯಲಿ ತೇಲುವಂತಿರುವ ಕದಿರು ಹಿಡಿದು ನುಗ್ಗತ್ತ ಸುತ್ತಲೂ ಒಮ್ಮೆ ಕಣ್ಣಾಡಿಸಲು ಸೌಂದರ್ಯದ ಸುಧೆಯಲಿ ತೇಲಿದಂತಿದ್ದರು.. ಒಂದೊಂದು ನಡುಗಡ್ಡೆ ಯಂತಿದ್ದು ಅಘನಾಶಿನಿ ನದಿ ಸುಮಾರು ಅರ್ಧ ಪರ್ಲಾಂಗ ಅಷ್ಟೇ ದೂರವಿದ್ದು ಸುತ್ತ ಮುತ್ತ ಸಣ್ಣ ಸಣ್ಣ ಕೆರೆ ದಂಡೆಗಳು ಗುಂದದಂತಿರುವ ದಿಬ್ಬಗಳು..

ಕೆರೆಯ ಸುತ್ತ ಹಸಿರು ಪಾಚಿಯ ಸಸ್ಯ ಮೆತ್ತೆಕೊಂಡಂತೆ ಬೆಳೆದು ಅದರ ನಡುವೆಯೇ ಅರಳಿ ನಿಂತಿರುವ ಕಮಲದ ಹೂವು ಆಹಾ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿದ್ದು..ಪ್ಯಾಟೆ ಹುಡುಗರಿಗೆ ಹಳ್ಳಿಯ ಸಿರಿ ಕಂಡು ಬೆರಗಾಗಿ ಬಾಗಿದ ಪೈರಿನ ತೆನೆಗಳನ್ನು ಹಿಂದೆ ಮುಂದೆ ಸರಿಮಾಡುತ್ತಾ ಬಂದು ಇಬ್ಬರೂ ಅಜ್ಜಿಯನ್ನು ಬಲವಾಗಿ ತಬ್ಬಿಕೊಂಡರು….

ಅಜ್ಜಿಗೋ ಸ್ವರ್ಗಾರೋಹಣ ಮಾಡಿದಷ್ಟೇ ಆನಂದ ಮೊಮ್ಮಕ್ಕಳ ಖುಷಿಯೂ ಹೇಳತೀರದು……ಬರೀ ಫಾರಿನ್ ಜನಗಳನ್ನಷ್ಟೇ ನೋಡಿದ ಕೇರಿಯ ಹೆಂಗಸರಿಗೆ ಈ ಮಕ್ಕಳು ಹೈಬ್ರಿಡ್ ತಳಿಗಳಂತೆ ಕಂಡು ತಲೆಕೆಡಿಸಿದ್ದಂತೂ ನಿಜ…..ಅಜ್ಜಿಯ ಕಣ್ಣಂಚಲ್ಲಿ ನೀರು ತುಂಬಿತ್ತು ಸೀರೆಯ ಸೆರಗಿನ ತುದಿ ಒದ್ದೆಯಾಗಿತ್ತು .. ತಬ್ಬಿ ನಿಂತ ಇಬ್ಬರನ್ನೂ ಸುಬ್ಬಜ್ಜಿ ಮನೆಯ ಅಂಗಳಕ್ಕೆ ಕರೆದುಕೊಂಡ್ ಬಂದಳು.. ತುಳಸಿಕಟ್ಟೆಯ ಶಿರದಿಂದ ಹೂವ ತೆಗೆದು ಮೊಮ್ಮಗಳ ಬಾಬ್ ಕಟ್ ಮುಡಿಗೆ ಮುಡಿಸಲು ಹೆಣಗಾಡಿದಳು….

ಮಗಾ ನಿಮ್ಮ ಹೆಸ್ರೂ ಮರ್ತೋಗಬಿಟ್ಟದೆ ಈ ಹಾಳಾದ ತಲೆಗೆ ಎಂತ ನಿಮ್ ಹೆಸ್ರು ಎಂದು ಅಜ್ಜಿ ಕೇಳಿದಾಗ ಮೊಮ್ಮಗ ಅರ್ಧಂಭರ್ಧ ಕನ್ನಡದಲ್ಲಿ ಹೇಳಿದ ನಾ ಸಂಪ್ರೀತ್ ಎಂದು, ಸನ್ನಿಧಿ ಎಂದು ಮೊಮ್ಮಗಳು ಹೇಳಿದಳು……..

ಮನೆಯ ಹೊಸಿಲು ದಾಟುವ ಮುನ್ನವೇ ಹಳೆನೆನಪುಗಳ ಪುಟಗಳು ತೆರೆದುಕೊಂಡವು…
ಮುಂದುವರೆಯುವುದು……… ಕು. ಜೀ…✍️

ಇದನ್ನೂ ಓದಿ:”ಸರ್ಕಾರಿ ಆಸ್ಪತ್ರೆ ಒಳಗೇ ಲಂಚದ ಮಾರುಕುಲ! ನರ್ಸ್‌ ಬಳಿ ಹಣ ಕೇಳಿದ ವೈದ್ಯ-ಆಡಿಯೋ ವೈರಲ್”