ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಿದ್ದಾಪುರ-ಕುಮಟಾ ಮಾರ್ಗದ ದೊಡ್ಮನೆ ಘಟ್ಟದಲ್ಲಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡ ಘಟನೆ ಗುರುವಾರ ನಡೆದಿದೆ.

ಜಿಲ್ಲೆಯಲ್ಲಿ ಗಾಳಿ ಮಳೆ ಜೋರಾದ ಬೆನ್ಮಲ್ಲೆ ಸಿದ್ದಾಪುರ ಬಡಾಳ ಕುಮಟಾ ಮಾರ್ಗದ ದೊಡ್ಮನೆ ಘಟ್ಟ ಪ್ರದೇಶದ ಬಳಿ ರಾಜ್ಯ ಹೆದ್ದಾರಿಗೆ ಬೃಹದಾಕಾರದ ಮರ ಉರುಳುಬಿದ್ದಿದೆ. ಇದರಿಂದ ಎರಡು ಬದಿ ಸಂಪರ್ಕ ಕಡಿತಗೊಂಡಿದ್ದು ಸಾರಿಗೆ ಬಸ್ ಸೇರಿದಂತೆ ಹಲವು ವಾಹನಗಳು ಘಟ್ಟ ಪ್ರದೇಶದಲ್ಲಿಯೇ ಸಾಲುಗಟ್ಟಿವೆ.
ಇನ್ನು ಸುಮಾರು 10-30 ರ ವೇಳೆ ಈ ಬೃಹತ್ ಮರ ಬಿದ್ದಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ಕುಮಟಾ ಸಾಗರ ಬಸ್ ಸಂಚಾರ ಮಾಡಿದ್ದು ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ನಂತರ ಬಂದ ಎಲ್ಲ ವಾಹನಗಳು ಎರಡು ಬದಿ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.

ಇನ್ನು ಘಟ್ಟ ಪ್ರದೇಶದಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಸುದ್ದಿ ತಿಳಿದ ತಕ್ಷಣ ಸಿದ್ದಾಪುರ ಮಾರ್ಗದಿಂದ ಆಗಮಿಸಿದ ವಾಹನಗಳು ಉಡಳ್ಳಿ, ದೊಡ್ಮನೆ ಬಳಿ ಹಾಗೂ ಕುಮಟಾ ಮಾರ್ಗದಿಂದ ಆಗಮಿಸಿದ ವಾಹನಗಳು ಮಾಸ್ತಿಮನೆ, ಬಡಾಳ ಬಳಿ ನಿಲ್ಲಿಸಲಾಗಿದೆ.
ಇನ್ನು ಮರವನ್ನು ತೆರವು ಮಾಡಲಾಗುತ್ತಿದೆ. ಬೃಹತ್ ಮರವಾಗಿರುವ ಕಾರಣ ಇನ್ನಷ್ಟು ಸಮಯವಾಗಬಹುದು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ