ಸುದ್ದಿಬಿಂದು ಬ್ಯೂರೋ‌ ವರದಿ
ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿ ಈ ಹಿಂದಿನ ಸರ್ಕಾರದ ಆದೇಶದಂತೆಯೇ ಎಲ್ಲ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ ಹಾಗು ವೈದ್ಯರ ನೇಮಕ ಪ್ರಕ್ರಿಯೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಮಿತಿಯನ್ನು ರಚಿಸಿ, ಸಮಿತಿಯ ಎಲ್ಲರ ಜೊತೆಗೂಡಿ ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು, ಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಿ ಸರಕಾರದ ಮೇಲೆ ಒತ್ತಡ ತರುವ ಎಲ್ಲ ಪ್ರಯತ್ನ ಮಾಡುವ ನಿರ್ಧಾರವನ್ನು ಒಕ್ಕೊರಲಾಗಿ ಕೈಗೊಳ್ಳಲಾಯಿತು.

ನಗರದ ನೆಮ್ಮದಿ ಕುಟೀರದಲ್ಲಿ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಶಿರಸಿ ಸರಕಾರಿ ಆಸ್ಪತ್ರೆಯ ಮುಂದಿನ ಹೋರಾಟದ ರೂಪುರೇಷೆ ಕುರಿತಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಸಹಮತಿಯ ಮೇರೆಗೆ ಈ ನಿರ್ಧಾರವನ್ನು ಸಭೆಯು ಕೈಗೊಂಡಿತು. ಸಭೆಯನ್ನುದ್ಧೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಆಸ್ಪತ್ರೆಯ ಕಟ್ಟಡ ಕೆಲಸಗಳು ನಡೆಯುತ್ತಿದ್ದು, 80% ಪ್ರತಿಶತ ಕಾಮಗಾರಿ ಮುಗಿದು ಹಲವಾರು ತಿಂಗಳಾದರೂ ಮುಂದಿನ ಹಂತದ ಯಾವುದೇ ಪ್ರಕ್ರಿಯೆಯು ಆರಂಭವಾಗತ್ತಿಲ್ಲ. ಕಳೆದ ಒಂದು ವರ್ಷದ ಹಿಂದೆಯೇ ವೈದ್ಯರ ನೇಮಕಾತಿ ಮತ್ತು ಯಂತ್ರೋಪಕರಣಗಳ ಖರೀದಿಗೆ ಪ್ರಸ್ತಾವನೆ ಕಳಿಸಿದ್ದರೂ ಸಹ, ಯಾವುದೇ ಪ್ರಕ್ರಿಯೆ ಸರಕಾರದಿಂದ ನಡೆದಿಲ್ಲ.

ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸತತ ಪರಿಶ್ರಮದ ಕಾರಣಕ್ಕೆ ಕಟ್ಟಡ ನಿರ್ಮಾಣಕ್ಕೆ ರೂ.142 ಕೋಟಿ ಹಾಗು ಯಂತ್ರೋಪಕರಣಗಳ ಖರೀದಿಗಾಗಿ 30 ಕೋಟಿ ರೂಪಾಯಿಯನ್ನು ಮೀಸಲಿಟ್ಟು ಸರ್ಕಾರ ಆದೇಶ ನೀಡಿತ್ತು. ನಂತರದಲ್ಲಿ ಹಾಲಿ ಸರಕಾರದಲ್ಲಿ ಅದನ್ನು 5 ಕೋಟಿಗೆ ಇಳಿಸುವ ಕೆಲ ಪ್ರಯತ್ನಗಳೂ ನಡೆದಿತ್ತು. ಇದು ಕ್ಷೇತ್ರದ ಜನರಿಗೆ ಆತಂಕಕಾರಿ ವಿಚಾರವಾಗಿದೆ. ಆದರೆ ನಂತರ ನಿರಂತರವಾಗಿ ನಡೆದ ನಮ್ಮೆಲ್ಲರ ಹೋರಾಟದ ಫಲವಾಗಿ ಶಾಸಕರು, ಸಚಿವರು ಆಸ್ಪತ್ರೆ ಕುರಿತಾಗಿ ಈ ಮೊದಲಿನ ಆದೇಶದಂತೆಯೇ ಎಲ್ಲ ಅತ್ಯಾವಶ್ಯಕ ಯಂತ್ರೋಪಕರಣಗಳ ಜೊತೆಗೆ ಜಿಲ್ಲಾ ಆಸ್ಪತ್ರೆಯನ್ನಾಗಿ ಎಲ್ಲ ಕಾಮಗಾರಿ ನಡೆಯುವಂತೆ ಮಾಡಲಾಗುವುದು ಎಂದಿದ್ದರು.

ಆದರೆ ಇದೀಗ ಆಸ್ಪತ್ರೆಗೆ ಸಂಬಂಧಿಸಿ ಮುಂದಿನ ಹಂತದ ಕಾಮಗಾರಿ, ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ಈ ಸಮಾನ ಮನಸ್ಕರ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ. ಮತ್ತು ಎಲ್ಲರ ಅಭಿಪ್ರಾಯದ ನಂತರ ಸೂಕ್ತ ನಿರ್ಧಾರವನ್ನು ಎಲ್ಲರ ಸಹಮತಿಯ ಮೇರೆಗೆ ಕೈಗೊಳ್ಳಲಾಗುವುದು ಎಂದರು.

ಮಾಜಿ ಜಿಪಂ ಸದಸ್ಯ ಹಾಲಪ್ಪ‌ ಜಕ್ಕಣ್ಣ್‌ನವರ್,ನಿವೃತ್ತ ಇಂಜಿನಿಯರ್ ವಿ.ಎಂ. ಭಟ್ಟ, ಡಾ. ಕೆ.ವಿ. ಶಿವರಾಮ್ ಕಾಂಗ್ರೆಸ್ ಮುಖಂಡ ಪ್ರವೀಣ ಗೌಡರ್ ತೆಪ್ಪಾರ್, ನೆಗ್ಗು ಗ್ರಾ ಪಂ ಸದಸ್ಯೆ ಜ್ಯೋತಿ ಹೆಗಡೆ, ಕೆ.ಬಿ. ಲೋಕೇಶ ಹೆಗಡೆ, ಮನೋಹರ ಮಲ್ಮನೆ,ಡಾ. ಜಿ.ಎ.ಹೆಗಡೆ ಸೋಂದಾ, ಉಷಾ ಹೆಗಡೆ, ವಕೀಲರಾದ ಮನೋಜ ಪಂಡಿತ್, ಪ್ರಕಾಶ ಹೆಗಡೆ, ಜಯಶೀಲ ಗೌಡರ್ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯವನ್ನು, ಸಲಹೆಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ರಂಗದ, ಅನೇಕ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ 70ಕ್ಕೂ ಅಧಿಕ ಚಿಂತಕರು ಭಾಗವಹಿಸಿದ್ದರು.

ಇದನ್ನೂ ಓದಿ