ಸುದ್ದಿಬಿಂದು ಬ್ಯೂರೋ
ಹೊನ್ನಾವರ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮತದಾರರನ್ನ ಸೆಳೆಯಲು ಝಣಝಣ ಕಾಂಚಾಣನ ಆಟ ಬಲೂ ಜೋರಾಗಿದ್ದು, ಮತದಾರರ ಬಳಿ ಹಣ ಜೊತೆಗೆ ಶ್ರೀ ಮಂಜುನಾಥ ದೇವರ ಪೋಟೊ ಮೇಲೆ ಆಣೆ-ಪ್ರಮಾಣ ಮಾಡಿಸಿಕೊಂಡು ಹಣ ನೀಡುವ ಕಾರ್ಯ ನಡೆಯುತ್ತಿದ್ದು, ಇದೀಗ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು, ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವಂತಾಗಿದೆ.
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನಿಂದಲ್ಲೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ರಾಷ್ಟ್ರೀಯ ಪಕ್ಷವೊಂದು ಈ ಬಾರಿ ಯಾವುದೇ ಧರ್ಮ ಸಂಕರ್ಷಕ್ಕೆ ಎಡೆಮಾಡಿಕೊಡುವ ಪ್ರಕರಣಗಳು ಸಿಗದ ಕಾರಣ ಮತದಾರಲ್ಲಿ ಆಣೆ-ಪ್ರಮಾಣ ಮಾಡಿಸಿಕೊಂಡು ಭಾವನಾತ್ಮಕವಾಗಿ ಮತ ಪಡೆಯುವ ಕಾರ್ಯ ಕ್ಷೇತ್ರದಲ್ಲಿ ಬಲೂ ಜೋರಾಗಿ ನಡೆದಿದೆ. ವ್ಯಾಪಕ ಭ್ರಷ್ಟಾಚಾರ ಸೇರಿದಂತೆ ಅಕ್ರಮ ಗಣಿಗಾರಿಕೆಯ ಮೂಲಕ ಕೋಟ್ಯಾಂತರ ರೂ. ಅಕ್ರಮ ಹಣ ಸಂಗ್ರಹಿಸಿದವರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅಭಿವೃದ್ಧಿ ಮತ್ತು ಸಾಮಾಜಿಕ ಕಾಳಜಿಯ ಮೂಲಕ ಮತ ಕೇಳುವ ನೈತಿಕತೆ ಇಲ್ಲದೇ ವಾಮ ಮಾರ್ಗದಲ್ಲಿ ಮತದಾರರನ್ನು ಪುಸಲಾಯಿಸುವ ಮತ್ತು ವಿವಿಧ ಆಮಿಷೆಗಳಿಗೆ ಒಳಪಡಿಸುವ ಕಾರ್ಯ ಕ್ಷೇತ್ರದಲ್ಲಿ ಬಲೂ ಜೋರಾಗಿದೆ ಎನ್ನುವ ಚರ್ಚೆ ಜೋರಾಗಿದೆ.
ಮತದಾರರಿಗೆ ನೇರವಾಗಿ ನೋಟು ಕೊಟ್ಟರೆ ಮತ ಹಾಕದೇ ಇರುವ ಸಾಧ್ಯತೆ ಇರುವುದರಿಂದ ಶ್ರೀಮಂಜುನಾಥ ದೇವರ ಪೋಟೊ ಮೇಲೆ ಆಣೆ-ಪ್ರಮಾಣ ಮಾಡಿಸಿ, ನೋಟು ನೀಡುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಹಾಗಾಗಿ ಮತದಾರರು ಆಣೆ-ಪ್ರಮಾಣಗಳಿಗೆ ಅಥವಾ ಇನ್ಯಾವುದೇ ಆಮಿಷೆಗಳಿಗೆ ಬಲಿಯಾಗಿ, ನಿಮ್ಮ ಮತವನ್ನು ಮಾರಿಕೊಳ್ಳಲೇ ಅಭಿವೃದ್ಧಿ ಚಿಂತನೆ ಇರುವ ಮತ್ತು ಬಡ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಇರುವ ಓರ್ವ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳಿಗೆ ಮನ್ನಣೆಗೆ ನೀಡಬೇಕೆಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ