ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಶಿಕ್ಷಕ ದಿನಾಚರಣೆ ಅಂಗವಾಗಿ ಸುದೀರ್ಘ ಕಾಲ ಪ್ರಾಮಾಣಿಕವಾಗಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ದಂಪತಿಯನ್ನು ದಿನಕರ ವೇದಿಕೆ, ಉತ್ತರ ಕನ್ನಡ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಂಕೋಲಾದ ಪುರ್ಲಕ್ಕಿಬೇಣದಲ್ಲಿರುವ ಸನ್ಮಾನಿತರ ಸ್ವಗೃಹದಲ್ಲಿ ಸೆ.5ರಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪ್ರಾಥಮಿಕ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸುಖದ ನಾಯಕ ಹಾಗೂ ಭವಾನಿ ನಾಯಕ ದಂಪತಿಯನ್ನು ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದಂಪತಿ, ಶಿಕ್ಷಕ ವೃತ್ತಿಯುದ್ದಕ್ಕೂ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ. ನಮ್ಮ ಸೇವೆಯನ್ನು ಗುರುತಿಸಿ ನಿವೃತ್ತಿಯ ನಂತರವೂ ಸನ್ಮಾನಿಸಿರುವುದು ಅತ್ಯಂತ ಸಂತೋಷ ತಂದಿದೆ. ದಿನಕರ ದೇಸಾಯಿಯವರ ಆದರ್ಶಗಳನ್ನು ಪಾಲಿಸಿಕೊಂಡು ವೇದಿಕೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ ಮಾತನಾಡಿ, ಸುಖದ ನಾಯಕ ಹಾಗೂ ಭವಾನಿ ನಾಯಕ ದಂಪತಿ ಪ್ರತಿಭಾವಂತ ಶಿಕ್ಷಕರಾಗಿದ್ದು, ಸರಳ ಜೀವನದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇಂತಹ ಶಿಕ್ಷಕ ದಂಪತಿಯನ್ನು ಗೌರವಿಸುವ ಅವಕಾಶ ದೊರೆತಿರುವುದು ದಿನಕರ ವೇದಿಕೆಯ ಹೆಮ್ಮೆ ಎಂದರು.

ವೇದಿಕೆಯ ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿ ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಕರುಣಾಕರ ನಾಯ್ಕ ಹಾಗೂ ಸಹಕಾರ್ಯದರ್ಶಿ ವಸಂತ ನಾಯ್ಕ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಹಿರಿಯ ಸದಸ್ಯ ದುರ್ಗಾನಂದ ದೇಸಾಯಿ ಸನ್ಮಾನ ಪತ್ರ ವಾಚಿಸಿದರು.

ಸನ್ಮಾನಿತರ ಪರವಾಗಿ ರಾಮನಾಥ ಕಾಮತ್, ಗೋಪಾಲಕೃಷ್ಣ ನಾಯಕ, ಎಂ.ಎಂ. ಕರ್ಕಿಕರ ಹಾಗೂ ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ ಅಭಿನಂದನಾ ಮಾತುಗಳನ್ನಾಡಿದರು. ಹಿರಿಯ ಸದಸ್ಯ ಶ್ರೀಧರ ನಾಯ್ಕ ವಂದನಾರ್ಪಣೆ ನೆರವೇರಿಸಿದರು. ಕೋಶಾಧ್ಯಕ್ಷ ಸಂತೋಷ್ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಸದಸ್ಯ ಮಹಾಂತೇಶ ರೇವಡಿ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯ ಉಪಾಧ್ಯಕ್ಷ ರಫೀಕ್ ಶೇಖ್, ಸಂಘಟನಾ ಕಾರ್ಯದರ್ಶಿ ಜಿ.ಆರ್. ತಾಂಡೇಲ್, ಶೀಲಾ ಐ. ಬಂಟ, ಚಂದ್ರಕಾಂತ್ ಗಾಂವಕರ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ/ ಮನೆಗೆ ಮರಳುತ್ತಿದ್ದ ವ್ಯಕ್ತಿಗೆ ದಾರಿಯಲ್ಲೇ ಎದುರಾಯ್ತು ಕರಡಿ; ಕ್ಷಣಾರ್ಧದಲ್ಲಿ ದಾಳಿ!