ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಮಿರ್ಜಾನ-ಖಂಡಗಾರ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವೇ ಹಾಳಾಗಲು ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು, ಕ್ರಮ ಜರುಗಿಸದೆ ಇರುವ ಬಗ್ಗೆ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಭಾಗದಲ್ಲಿ ನೂರಾರು ಮನೆಗಳಿದ್ದು, ಹೆಚ್ಚಿನವರು ರೈತಾಭಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರು ನಿತ್ಯವೂ ತಮ್ಮ ತೋಟಗಳಿಗೆ ಬೇಕಾದ ಗೊಬ್ಬರ ಸೇರಿದಂತೆ ತಾವು ಬೆಳೆದ ಅಡಿಕೆ, ಭತ್ತವನ್ನು ಸಾಗಾಟ ಮಾಡುತ್ತಾರೆ. ಜೊತೆಗೆ ಬೈಕ್ ಸವಾರರು ಕೂಡ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ.ಆದರೆ ಕೆಲವು ಉದ್ಯಮಿಗಳು ನಿಗದಿಗಿಂತ ಹೆಚ್ಚಿನ ಭಾರದ ವಾಹನಗಳನ್ನು ವರ್ಷಪೂರ್ತಿ ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಡಾಂಬರ್ ಸಂಪೂರ್ಣವಾಗಿ ಕಿತ್ತುಹೋಗಿ, ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರಿಗೆ ಸಂಚಾರ ಕಷ್ಟಕರವಾಗಿದೆ.
ಭಾರೀ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ, ತಹಶೀಲ್ದಾರ ಹಾಗೂ ಪೊಲೀಸ್ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಇದುವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ರಸ್ತೆಯ ಹೊಂಡಗಳನ್ನು ಮುಚ್ಚಲು ಸಹ ಯಾರೂ ಮುಂದಾಗಿಲ್ಲ ಎನ್ನಲಾಗಿದೆ.
ರಸ್ತೆಯ ದುಸ್ಥಿತಿಯಿಂದಾಗಿ ಎಷ್ಟೇ ಎಚ್ಚರಿಕೆಯಿಂದ ವಾಹನ ಚಲಾಯಿಸಿದರೂ ನಿಯಂತ್ರಣ ತಪ್ಪಿ ಬೀಳುವ ಘಟನೆಗಳು ನಡೆಯುತ್ತಿವೆ. ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ದುರಸ್ತಿ ಮಾಡದಿದ್ದರೆ ಸಂಚಾರ ಇನ್ನಷ್ಟು ಕಷ್ಟವಾಗಲಿದೆ. ಹೀಗಾಗಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಅನಾಹುತ ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ/ಪಡ್ತಿ ಪ್ರೀಮಿಯರ್ ಲೀಗ್ ಯಶಸ್ಸು: “ಇದು ಸಮಾಜದ ಒಗ್ಗಟ್ಟಿನ ಗೆಲುವು : ರೂಪಾಲಿ ನಾಯ್ಕ

