ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಿಸಿ ಕ್ಯಾಮೆರಾ ದೃಶ್ಯಗಳು ಬಹಿರಂಗಗೊಂಡಿವೆ. ಹಲ್ಲೆ ನಡೆದ ಬಳಿಕ ಆರೋಪಿತರು ರಸ್ತೆಯಲ್ಲಿ ನಡೆದು ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು,ಯತ್ನ ವಿಫಲವಾಗಿರುವುದಕ್ಕೆ ಓರ್ವ ವ್ಯಕ್ತಿ ಓರ್ವ ಹಂತಕರಿಗೆ ಬೈದಿರುವುದು ಸಿಸಿ ಕ್ಯಾಮೆರಾದಲ್ಲಿ ಆಡಿಯೋ ಸಹ ದಾಖಲಾಗಿದೆ. ಇದರಿಂದ ಆತನೇ ಹಂತಕರಿಗೆ ಸೂಪಾರಿ ಕೊಟ್ಟಿದ್ದನಾ ಎಂಬ ಚರ್ಚೆಗಳು ಜೋರಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ.

ಪಟ್ಟಣದ ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆ ರಸ್ತೆ ಭಾಗದಲ್ಲಿ ಆರೋಪಿಗಳ ಸಂಚಾರ ದೃಶ್ಯಗಳು ಪತ್ತೆಯಾಗಿದ್ದು, ಪೊಲೀಸರ ತನಿಖೆಗೆ ಸಹಾಯಕವಾಗಿವೆ. ಈ ಪ್ರಕರಣದಲ್ಲಿ ಕಾರಿನಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ನಾಲ್ವರನ್ನ ಈಗಾಗಲೇ ಮಾಜಾಳಿ ಚೆಕ್ ಪೊಸ್ಟ್ ಬಳಿ  ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿತರು ಕೊಲೆ ಯತ್ನ ನಡೆಸಿದ ನಂತರ ಕಾರನ್ನು ಬಿಟ್ಟು ಪರಾರಿಯಾಗಿದ್ದರು.

ಕಾರವಾರದ ಮಾಜಾಳಿ ಗಡಿಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆ, ಕೊಲೆ ಯತ್ನ ವಿಫಲವಾದ ಹಿನ್ನೆಲೆ ಆರೋಪಿತರಲ್ಲಿ ಒಬ್ಬನಿಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ತರಾಟೆಗೆ ತೆಗೆದುಕೊಳ್ಳುತ್ತಿರುವ ಆಡಿಯೋ/ವೀಡಿಯೋ ಕೂಡ ಬೆಳಕಿಗೆ ಬಂದಿದೆ ಎನ್ನಲಾಗಿದೆ. “ಕೆಲಸ ಪೂರ್ಣ ಮಾಡದೇ ಇದ್ದರೆ ನೀವು ಏಕೆ ಬಂದಿದ್ದೀರಿ?” ಎಂದು ಪ್ರಶ್ನಿಸುತ್ತಾ, ಅರೆಬರೆ ಕೆಲಸ ಮಾಡಿ ಪರಾರಿಯಾಗಿದ್ದೀರಾ ಎಂದು ಆ ವ್ಯಕ್ತಿ ಗದರಿಸಿರುವುದು ಸೆರೆಯಾಗಿದೆ. ಹಂತಕರಿಗೆ ಗದರಿಸಿದ ವ್ಯಕ್ತಿ ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ. ಇನ್ನೂ ಪರಾರಿಯಾದ ಇನ್ನೂ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ/ಗೋಪಾಲಕೃಷ್ಣ ನಾಯಕ ಕೊಲೆ ಯತ್ನ; ಆರೋಪಿಗಳು ಪೊಲೀಸ್ ವಶಕ್ಕೆ