ಗೋಕರ್ಣ :ಭಾರತೀಯ ಜನತಾ ಪಾರ್ಟಿ ಗೋಕರ್ಣ ಮಂಡಲದ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅವರು ತಮ್ಮ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೂರು ಸೇತುವೆಗಳ ಕಾಮಗಾರಿಗೆ ಶೇಕಡಾ 90 ರಷ್ಟು ಅನುದಾನ ತಂದಿರುವುದು ತಾನೇ ಎಂದು ಸ್ಪಷ್ಟಪಡಿಸಿದ ಅವರು, ಈ ಬಗ್ಗೆ ಜಿ. ಕೆ. ಹೆಗಡೆಯವರ ಬಳಿ ದಾಖಲೆಗಳನ್ನು ಒದಗಿಸಿ ಮಂಜೂರಾತಿ ಪಡೆದಿರುವುದಾಗಿ ಮತ್ತು ಅಧಿವೇಶನದಲ್ಲಿಯೂ ಈ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದ್ದರು.

ಇದೇ ವೇಳೆ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗವತ್ ವಿರುದ್ಧ ಹರಿಹಾಯ್ದ ಶಾಸಕರು, ಆತನೊಬ್ಬ ಪೇಪರ್ ಟೈಗರ್ ಹಾಗೂ ಬಚ್ಚಾ ಎಂದು ಲೇವಡಿ ಮಾಡಿದರು. ದಿನಕರ್ ಶೆಟ್ಟಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಲು ಆತ ಯಾರು ಎಂದು ಖಾರವಾಗಿ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದ್ದ ಘಟನೆಯನ್ನು ಬಹಿರಂಗಪಡಿಸಿದ ಅವರು, ಗೋಕರ್ಣದ ಬಳಿ ಕಾಂಗ್ರೆಸ್ ಮುಖಂಡರು ತಮ್ಮನ್ನು ಕಾಂಗ್ರೆಸ್ ಬರುವಂತೆ ಕರೆದಿದ್ದರು, ಆದರೆ ತಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಮತ್ತು ಇರುವ ಒಬ್ಬನೇ ಬಿಜೆಪಿ ಶಾಸಕನಿಗೆ ಶಕ್ತಿಯಿದೆ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾಗಿ ವಿವರಿಸಿದರು.

ತಮ್ಮ ರಾಜಕೀಯ ಹಿನ್ನೆಲೆಯನ್ನು ಮೆಲುಕು ಹಾಕಿದ ಶಾಸಕರು, ತಮ್ಮ ಇಡೀ ಕುಟುಂಬ ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಕಾಂಗ್ರೆಸ್ ವಿರೋಧಿಯಾಗಿಯೇ ಬೆಳೆದು ಬಂದಿದ್ದು, ಜನತಾ ಪರಿವಾರದ ತತ್ವದಡಿ ರಾಜಕೀಯ ಮಾಡಿದವರು ಎಂದು ಹೇಳಿದರು. ಜನತಾ ಪಕ್ಷದಿಂದಲೇ ಬಂದ ಕೆಲವರು ಟಿಕೆಟ್ ಸಿಕ್ಕಾಗ ಕಾಂಗ್ರೆಸ್ ಸೇರಿದರು, ಆದರೆ ತಾನು ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದವನಲ್ಲ ಎಂದು ಸ್ಪಷ್ಟಪಡಿಸಿದರು. ಸತತ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ತಮಗೆ ದೇವರ ಹಾಗೂ ಜನರ ಆಶೀರ್ವಾದವಿದೆ ಎಂದ ಅವರು, ಕಳೆದ ಚುನಾವಣೆಯಲ್ಲಿ ನಿವೇದಿತ್ ಆಳ್ವ ಅವರನ್ನು ಕಣಕ್ಕಿಳಿಸಿ ಠೇವಣಿ ಕಳೆದುಕೊಂಡವರ ಪರಿಸ್ಥಿತಿಯನ್ನು ಸಭೆಯಲ್ಲಿ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ/ಕಾರವಾರ ಮೆಡಿಕಲ್ ವಿದ್ಯಾರ್ಥಿ, ಚಿತ್ರದುರ್ಗ ಮೂಲದ ಯುವಕ ಅಪಘಾತದಲ್ಲಿ ಸಾವು