ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಆಡಳಿತ ಸುಧಾರಣೆ ಅಧ್ಯಕ್ಷರ ಆರ್ ವಿ.ದೇಶಪಾಂಡೆ ಕ್ಷೇತ್ರದ ಸರಕಾರಿ ಆಸ್ಪತ್ರೆಯಲ್ಲಿ 108 ಸಿಗದೆ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಸಾಗಿಸ ಬೇಕಾಗಿದ್ದ ಮಾಜಿ ಸೈನಿಕನೋರ್ವನಿಗೆ ಆಂಬುಲೆನ್ಸ್ ಸಿಗದೆ ನರಳಾಡಿ ಮೃತಪಟ್ಟ ಘಟನೆ ನಡೆದಿದೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಮಾಜಿ ಸೈನಿಕರೊಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಸಾಗಿಸಲು ಸುಮಾರು ಎರಡು ಗಂಟೆಗೂ ಹೆಚ್ಚಿನ ಸಮಯ ಕಾದುಕುಳಿತರು ಆಂಬುಲೆನ್ಸ್ ಸಿಗದೆ ರೋಗಿ ನರಳಾಡಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ರೋಗಿಯನ್ನು ನಿನ್ನೆ ಶನಿವಾರ ರಾತ್ರಿ ಸುಮಾರು ನಾಲ್ಕು ಗಂಟೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಸಾಗಿಸಲು 108 ಆಂಬುಲೆನ್ಸ್ ಬೇಕಾಗಿತ್ತು. ಆದರೆ ,ಸುಮಾರು ಮೂರು ಗಂಟೆಗಳ ಕಾಲ ಆಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ರೋಗಿಯ ಆರೋಗ್ಯ ಸ್ಥಿತಿ ಹದಗೆಟ್ಟು ಆಸ್ಪತ್ರೆಯಲ್ಲೆ ಕೊನೆಗೆ ಸಾವನ್ನಪ್ಪಿದ್ದಾರೆ.
ನನ್ನ ತಂದೆಯಾದ ಬಸ್ಟ್ಯಾಂನ್ ಸಂತಾನ ಬ್ರೀಗ್ಯಾಜಾ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಸೇನಾ ಅಧಿಕಾರಿ. ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುವ ಸಾಧ್ಯತೆ ಇತ್ತು. ಆದರೆ ಆಂಬುಲೆನ್ಸ್ ಸಿಗದ ಕಾರಣ ಈ ದುರ್ಘಟನೆ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಮೃತರ ಮಗ ಕಣ್ಣೀರು ಹಾಕಿದ್ದಾರೆ..
ಇದೇ ವೇಳೆ ಸ್ಥಳೀಯ ಆಸ್ಪತ್ರೆಯಲ್ಲೂ ಕಳೆದ 15 ದಿನಗಳಿಂದ 108 ಆಂಬುಲೆನ್ಸ್ನಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಕುರಿತು ವಿಚಾರಿಸಿದಾಗ ಆಂಬುಲೆನ್ಸ್ ಚಾಲಕರು “ಆಕ್ಸಿಜನ್ ಕೊರತೆಯಿಂದ ದೂರದ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ..
ದಾಂಡೇಲಿ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಂಬುಲೆನ್ಸ್ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡಿದರೂ ಕೆಲವೊಮ್ಮೆ 108 ಆಂಬುಲೆನ್ಸ್ ಒಂದು ಅಥವಾ ಎರಡು ಗಂಟೆಗಳ ನಂತರ ಮಾತ್ರ ಸ್ಥಳಕ್ಕೆ ಬರುತ್ತದೆ ಎನ್ನಲಾಗಿದೆ.108 ಆಂಬುಲೆನ್ಸ್ ಸೇವೆಯನ್ನು ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಆಡಳಿತ ಸುಧಾರಣೆ ಅಧ್ಯಕ್ಷರು ಶೀಘ್ರದಲ್ಲಿ ತನ್ನ ಕ್ಷೇತ್ರದಲ್ಲಿನ ಆರೋಗ್ಯ ಸುಧಾರಣೆಗೆ ಮುಂದಾಗಬೇಕಿದೆ ಎಂಬ ಆಗ್ರಹ ಹೆಚ್ಚಾಗಿದೆ.

