ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ಇಷ್ಟು ದಿನ ನಡೆಯುತ್ತಿದ್ದ ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೆ ಹೊಸ ತಿರುವು ಸಿಕ್ಕಿದ್ದು, ಮಾಜಿ ಶಾಸಕ ಸುನೀಲ ನಾಯ್ಕ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಸರಕಾರದ ಅವಧಿಯಲ್ಲೇ ಈ ಯೋಜನೆಗೆ ಅನುಮೋದನೆ ದೊರೆತಿರುವುದನ್ನು ಸ್ವತಃ ಒಪ್ಪಿಕೊಂಡಿರುವ ಅವರು, ಸಚಿವ ಮಂಕಾಳ ವೈದ್ಯ ಅವರ ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ತಾವೇ ತೆರೆ ಎಳೆದಂತಾಗಿದೆ. ಈ ಮೂಲಕ ಇದುವರೆಗೆ ನಡೆಸುತ್ತಿದ್ದ ಆರೋಪಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುವಂತಾಗಿದೆ.

ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಲಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸುನೀಲ ನಾಯ್ಕ, ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗೆ ಅನುಮೋದನೆ ನೀಡಿದ್ದರು ಎಂಬುದನ್ನು ಸಾರ್ವಜನಿಕ ಸಭೆಯಲ್ಲೇ ಒಪ್ಪಿಕೊಂಡರು.

ಸಭೆಯಲ್ಲಿ ಗುರುಗಳ ಸಮ್ಮುಖದಲ್ಲೇ ಸಚಿವ ಮಂಕಾಳ ವೈದ್ಯರ ಬಳಿ ಬೇಷರತ್ ಕ್ಷಮೆಯಾಚಿಸಿದ ಅವರು, “ನಾನು ಶಾಸಕನಾಗಿದ್ದಾಗಲೇ ಈ ಯೋಜನೆಗೆ ಅನುಮೋದನೆ ದೊರೆತಿತ್ತು. ಆದರೆ ಆ ಸಮಯದಲ್ಲಿ ಅದರ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇರಲಿಲ್ಲ,” ಎಂದು ಹೇಳುವ ಮೂಲಕ ತಮ್ಮ ಹಿಂದಿನ ಹೇಳಿಕೆಗಳಿಗೆ ತಾವೇ ವಿರೋಧಾಭಾಸ ಮೂಡಿಸಿಕೊಂಡರು. ಈ ಹೇಳಿಕೆ ಕೆಲಕಾಲ ಸಭೆಯಲ್ಲಿ ನಗೆಪಾಟಲಿಗೂ ಕಾರಣವಾಯಿತು.
ಇದೇ ವೇಳೆ ಮಾತನಾಡಿದ ಅವರು, “ನಮ್ಮ ಸರಕಾರದ ಅವಧಿಯಲ್ಲಿ ಏನೋ ತಪ್ಪಾಗಿದೆ. ಅದನ್ನು ಒಪ್ಪಿಕೊಂಡೇ ಮುಂದೆ ಸಾಗಬೇಕು. ಶರಾವತಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕಾಗಿದೆ,” ಎಂದು ಹೇಳಿದರು.

ಸಚಿವ ಮಂಕಾಳ ವೈದ್ಯರು ಈ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದು, ಈ ವಿಷಯದಲ್ಲಿ ಅವರು ಎಲ್ಲಿ ಕರೆ ನೀಡಿದರೂ ಹೋರಾಟಕ್ಕೆ ತಾನು ಸಿದ್ಧನಿದ್ದೇನೆ ಎಂದು ತಿಳಿಸಿದ ಅವರು, “ನಾವು ಎಲ್ಲರೂ ಸೇರಿ ಈ ಯೋಜನೆಯನ್ನು ನಿಲ್ಲಿಸುವ ಪ್ರಯತ್ನ ಮಾಡೋಣ,” ಎಂದು ಹೇಳಿದರು.

ಇದುವರೆಗೆ ಈ ಯೋಜನೆಗೆ ಕಾಂಗ್ರೆಸ್ ಸರಕಾರ ಹಾಗೂ ಸಚಿವರೇ ಕಾರಣ ಎಂದು ಆರೋಪಿಸಿ ಪ್ರಚಾರ ನಡೆಸುತ್ತಿದ್ದವರಿಗೆ, ಸುನೀಲ ನಾಯ್ಕ ಅವರ ಈ ಹೇಳಿಕೆ ರಾಜಕೀಯವಾಗಿ ದೊಡ್ಡ ಹೊಡೆತ ನೀಡಿದಂತಾಗಿದೆ. ಅವರ ಹೇಳಿಕೆಯಿಂದ ಸಚಿವರ ವಿರುದ್ಧ ನಡೆಯುತ್ತಿದ್ದ ಅಪಪ್ರಚಾರಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಂತಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ/ಸಮಾಜಸೇವಕನ ಮಾದರಿ ಹೆಜ್ಜೆ : ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಶೈಕ್ಷಣಿಕ ನೆರವು ಘೋಷಣೆ