ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕರಾವಳಿ ಭಾಗದಲ್ಲಿ ಹೋಳಿ ಹಬ್ಬವು ಕೇವಲ ಬಣ್ಣಗಳ ಹಬ್ಬವಲ್ಲ; ಅದು ಭಕ್ತಿ, ಸಂಪ್ರದಾಯ ಮತ್ತು ಸಮೂಹಭಾವದ ಸಾಂಸ್ಕೃತಿಕ ಉತ್ಸವ. ಇದೇ ಪರಂಪರೆಯ ಭಾಗವಾಗಿ ತಾಲೂಕಿನ ಚೆಂಡಿಯಾ ಗ್ರಾಮದ ಹೇಮಜ್ಜನ ಮಂಡದ ಗುನಗಿ ಸಮಾಜದವರು 10 ವರ್ಷಗಳ ಬಳಿಕ ಸುಗ್ಗಿಮೇಳವನ್ನು ವೈಭವದಿಂದ ಆರಂಭಿಸಿದ್ದು, ಗ್ರಾಮದಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ.
ಹೋಳಿ ಹುಣ್ಣಿಮೆಗೆ ಒಂಬತ್ತು ದಿನಗಳ ಮುನ್ನ ಗ್ರಾಮ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯದಂತೆ ಕಳೆದ ಫೆ.21ರಂದು ಸಂಜೆ 5 ಗಂಟೆಗೆ ಸುಗ್ಗಿಮೇಳಕ್ಕೆ ಚಾಲನೆ ನೀಡಲಾಯಿತು. ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರ ಅಮೃತ ಹಸ್ತದಿಂದ ಮೇಳದ ಉದ್ಘಾಟನೆ ನೆರವೇರಿತು. ಸಂಕಲ್ಪ, ಪೂಜೆ ಮತ್ತು ಸಮೂಹ ಪ್ರಾರ್ಥನೆಯೊಂದಿಗೆ ತುರಾಯಿ, ಚಂಡೆ ಹಾಗೂ ತಾಳಗಳ ಘೋಷದಲ್ಲಿ ಮೇಳ ಪ್ರಾರಂಭಗೊಂಡಿತು.
ಮಂಡದ ಬುಧವಂತರಾದ ನಿಶಾಂಭರ, ಮಾದು ಗುನಗಿ (ಹೊನ್ನಗದ್ದೆ ಭಾಗ), ಕೋಲಕಾರರ ಮುರಾರಿ ಎಲ್. ಗುನಗಿ (ಇಡೂರು) ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾಜದ ಹಿರಿಯರು ಮತ್ತು ಯುವಪೀಳಿಗೆ ಒಂದಾಗಿ ಭಾಗವಹಿಸಿದ್ದು, ಸಂಪ್ರದಾಯದ ನಿರಂತರತೆಯನ್ನು ಕಾಪಾಡುವ ಸಂಕಲ್ಪ ಸ್ಪಷ್ಟವಾಗಿ ಕಾಣಿಸಿಕೊಂಡಿತು.
ಸುಗ್ಗಿ ಪ್ರಾರಂಭವಾದ ಬಳಿಕ ಕಾಮದಹನದವರೆಗೆ ಭಾಗವಹಿಸುವವರು ಮನೆಗೆ ತೆರಳದೇ ನಿಯಮ-ನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಚೆಂಡಿಯಾದ ಐದು ಹಳ್ಳಿಮಂಡ ಸೇರಿದಂತೆ ತೊಡೂರು, ಕೊಡಾರ, ಅರಗಾ, ಬಿಣಗಾ, ಕಾರವಾರ ಗುರುಮಠ, ಪಂಚಮಹಲ, ಕಡವಾಡ ಹಾಗೂ ಕಿನ್ನರ ಮಂಡಗಳಿಗೆ ಭೇಟಿ ನೀಡಿ, ಸಮಾಜದ ಪ್ರತಿಯೊಬ್ಬರ ಮನೆಗೆ ತೆರಳಿ ಸುಗ್ಗಿ ಕುಣಿದು ಸಂಭ್ರಮಿಸಲಾಗುತ್ತದೆ. ಪ್ರತಿ ಮನೆಯ ಕನಿಷ್ಠ ಒಬ್ಬ ಸದಸ್ಯ ಮೇಳದಲ್ಲಿ ಪಾಲ್ಗೊಳ್ಳುವುದು ಈ ಆಚರಣೆಯ ವಿಶಿಷ್ಟತೆ.
ಈ ಬಾರಿಯ ಮೇಳದಲ್ಲಿ 7 ತುರಾಯಿಗಳೊಂದಿಗೆ ಸುಮಾರು 100ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ. ಹತ್ತು ವರ್ಷಕ್ಕೊಮ್ಮೆ ನಡೆಯುವ ಈ ಸುಗ್ಗಿಮೇಳ ಗ್ರಾಮದಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವುದರ ಜೊತೆಗೆ, ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ದೂರದ ಊರುಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರೂ ಈ ಸಂದರ್ಭಕ್ಕೆ ತಮ್ಮ ಊರಿಗೆ ಮರಳಿ ಬಂದು ಭಾಗವಹಿಸುವುದು ವಿಶೇಷವಾಗಿದ್ದು, ಮನೆಮನೆಗಳಲ್ಲಿ ಆತಿಥ್ಯ, ಭಕ್ತಿಗೀತೆ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ.
ಲಕ್ಷಾಂತರ ರೂಪಾಯಿ ವೆಚ್ಚವನ್ನು ಸಮಾಜದವರು ಸ್ವಂತವಾಗಿ ಭರಿಸಿ, ಯಾವುದೇ ಹೊರಗಿನ ಅನುದಾನವಿಲ್ಲದೆ ತಮ್ಮ ಶ್ರಮ ಮತ್ತು ಸಂಪನ್ಮೂಲಗಳಿಂದ ಮೇಳವನ್ನು ನಡೆಸುತ್ತಿರುವುದು ಗಮನಾರ್ಹ. ಇದು ಗುನಗಿ ಸಮಾಜದ ಭಕ್ತಿ, ಸಂಸ್ಕೃತಿ ಪ್ರೇಮ ಮತ್ತು ಸಮೂಹ ಶಕ್ತಿಯ ಪ್ರತೀಕವಾಗಿದೆ.
ಸುಗ್ಗಿ ಕುಣಿತವು ಕೇವಲ ಮನರಂಜನೆಗೆ ಸೀಮಿತವಲ್ಲ; ಅದು ದೇವರ ಆರಾಧನೆ, ಸಮೃದ್ಧಿಯ ಪ್ರಾರ್ಥನೆ ಮತ್ತು ಸಮೂಹ ಒಗ್ಗಟ್ಟಿನ ಜೀವಂತ ಸಂಕೇತವಾಗಿ ಕರಾವಳಿ ಸಂಸ್ಕೃತಿಯ ವೈಭವವನ್ನು ಮತ್ತೊಮ್ಮೆ ಮೆರೆದಿದೆ.
ಇದನ್ನೂ ಓದಿ/“ಸಿಎಂ ಸ್ಥಾನಕ್ಕೆ ಗುಡ್ಬೈ ಹೇಳ್ತಾರಾ..? ದೆಹಲಿ ರಾಜಕಾರಣಕ್ಕೆ ತೆರಳಿದ್ದಾರ ನಿತೀಶ್ಕುಮಾರ

