ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ ಎನ್ನುವ ವದಂತಿಯಿಂದಾಗಿ ಪಟ್ಟಣದ ಹಲವು ಪೆಟ್ರೋಲ್ ಬಂಕ್ಗಳ ಮುಂದೆ ಬೈಕ್ಸವಾರರು ಪೆಟ್ರೋಲ್ ತುಂಬಿಸಿಕೊಳ್ಳಲಿ ಮುಗಿಬಿದ್ದ ಘಟನೆ ನಡೆದಿದೆ.
ಯುದ್ಧದ ಪರಿಣಾಮವಾಗಿ ಪೆಟ್ರೋಲ್ ದರ ತಕ್ಷಣವೇ ಹೆಚ್ಚಾಗಬಹುದು ಎಂಬ ವದಂತಿಯಿಂದಾಗಿ ವಾಹನ ಸವಾರರು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಸಿಕೊಂಡರು. ಕೆಲವರು ಕೇವಲ ವಾಹನಗಳಲ್ಲೇ ಅಲ್ಲದೆ ಕ್ಯಾನ್ಗಳಲ್ಲಿ ತುಂಬಿಸಿಕೊಂಡು ಹೋಗಿರುವುದು ಕಂಡು ಬಂತು.
ಏಕಾಏಕಿ ಬೇಡಿಕೆ ಏರಿಕೆಯಾಗಿದ್ದು, ಪಟ್ಟಣದ ಮೂರಕ್ಕೂ ಹೆಚ್ಚು ಬಂಕ್ಗಳಲ್ಲಿ ಪೆಟ್ರೋಲ್ ತಾತ್ಕಾಲಿಕವಾಗಿ ಖಾಲಿಯಾದ ಘಟನೆ ನಡೆದಿದೆ.
ಪೆಟ್ರೋಲ್ ಸಿಗದೆ ಕೆಲ ಭಟ್ಕಳಿಗರು ನೆರೆಯ ಹೊನ್ನಾವರ ಮತ್ತು ಕುಂದಾಪುರ ಭಾಗಗಳಿಗೆ ತೆರಳಿ ಪೆಟ್ರೋಲ್ ತುಂಬಿಸಿಕೊಂಡು ಬಂದಿರುತ್ತಿದ್ದಾರೆನ್ನಲಾಗಿದೆ.
ಇದರಿಂದ ಆ ಭಾಗದ ಬಂಕ್ಗಳಲ್ಲಿಯೂ ಹೆಚ್ಚುವರಿ ಒತ್ತಡ ಉಂಟಾಗಿದೆ ಎನ್ನಲಾಗಿದೆ. ಸ್ಥಳೀಯ ಪೆಟ್ರೋಲ್ ಬಂಕ್ ನಿರ್ವಹಕರು, “ತೈಲ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ. ನಿಯಮಿತ ಸರಬರಾಜು ಮುಂದುವರಿದಿದೆ. ಜನರು ಆತಂಕಕ್ಕೆ ಒಳಗಾಗದೆ ಅಗತ್ಯವಿರುವಷ್ಟೇ ಪೆಟ್ರೋಲ್ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ತೈಲ ದರ ಬದಲಾವಣೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರವಾಗುತ್ತದೆ. ತಕ್ಷಣದ ದರ ಏರಿಕೆಯ ಕುರಿತು ಅಧಿಕೃತ ಘೋಷಣೆಗಳಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವದಂತಿಯಿಂದಾಗಿ ಗೊಂದಲ ಉಂಟುಮಾಡಿದಂತಾಗಿದೆ.
ಇದನ್ನೂ ಓದಿ/ಆಟೋ ಪ್ರಯಾಣದ ವೇಳೆ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ : ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು

