ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿರುವ ಸರಕಾರಿ ಬಾಲಕಿ ಬಾಲಮಂದಿರದಲ್ಲಿ ಶನಿವಾರ ಮಧ್ಯಾಹ್ನ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಬಾಲಕಿ ನೇಣು ಹಾಕಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಎಸ್ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಶನಿವಾರ ಮಧ್ಯಾಹ್ನ ಸುಮಾರು 1ಗಂಟೆ ವೇಳೆಗೆ ಯಾರಿಗೂ ತಿಳಿಯದಂತೆ ಬಾಲಮಂದಿರದ ಮೇಲಿನ ಕೊಣೆಗೆ ತೆರಳಿದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಬ್ಬಂದಿಯ ಸಮಯೋಚಿತ ಗಮನದಿಂದ ಬಾಲಕಿಯನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ನಗರದ ಸರಕಾರಿ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಎರಡು ವಾರಗಳಿಂದ ಶಾಲೆಗೆ ಹಾಜರಾಗದೆ ಬಾಲಮಂದಿರದಲ್ಲಿಯೇ ವಾಸವಾಗಿದ್ದಳು. ಬಾಲಕಿ ಕಳೆದ ಆಗಸ್ಟ್ ತಿಂಗಳಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿ ದಾಖಲಾಗಿದ್ದ ಹಿನ್ನೆಲೆ ಹೊಂದಿದ್ದಾಳೆ ಎಂದು ತಿಳಿದುಬಂದಿದೆ.
ಮಾನಸಿಕವಾಗಿ ತೀವ್ರ ಕುಗ್ಗಿದ್ದ ಬಾಲಕಿ ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಂಪಾಟ ನಡೆಸುತ್ತಿದ್ದಳು.ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಕೆಯನ್ನು ಧಾರವಾಡದ ನಿಮಾನ್ಸ್ ಸಂಸ್ಥೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಬಳಿಕವೂ ಆತ್ಮಹತ್ಯೆ ಮಾಡುವುದಾಗಿ ಪದೇಪದೇ ಬೆದರಿಕೆ ಒಡ್ಡುತ್ತಿದ್ದಳು ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಬಾಲಮಂದಿರದಲ್ಲಿ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾದ ಸುಮಾರು 20 ಬಾಲಕಿಯರು ವಾಸವಿದ್ದು, 10ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬಾಲಮಂದಿರದ ಮೇಲ್ವಿಚಾರಣೆ ಹಾಗೂ ಮಾನಸಿಕ ಆರೋಗ್ಯ ಆರೈಕೆ ವ್ಯವಸ್ಥೆಗಳ ಕುರಿತು ಚರ್ಚೆ ಆರಂಭವಾಗಿದೆ.
ಇದನ್ನೂ ಓದಿ/Gold Silver Rate Today: ದಾಖಲೆ ಮಟ್ಟದಿಂದ ಜಾರಿದ ಬಂಗಾರ! ಇಂದಿನ ಚಿನ್ನ–ಬೆಳ್ಳಿ ದರ ಎಷ್ಟು?


