ಸುದ್ದಿಬಿಂದು ಬ್ಯೂರೋ ವರದಿ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಹೂತಿರುವ ಶವಗಳನ್ನು ಹೊರತೆಗೆದುವ ಕಾರ್ಯ ಆರಂಭವಾಗಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ತನಿಖಾ ದಳದ ತನಿಖಾಧಿಕಾರಿ ಜಿತೇಂದ್ರ ದಯಾಮ್ ಮತ್ತಿತರ ಅಧಿಕಾರಿಗಳು ಹಾಜರಿದ್ದಾರೆ.

ಶವಗಳನ್ನು ಹೊರತೆಗೆದಲು ಎಸ್‌ಐಟಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಧರ್ಮಸ್ಥಳ ಗ್ರಾಮ ಪಂಚಾಯಿತಿ 12ಮಂದಿ ಕಾರ್ಮಿಕರನ್ನು ನಿಯೋಜಿಸಿದೆ. ಅವರು ಹಾರೆ, ಪಿಕಾಸಿ, ಗುದ್ದಲಿ ಜತೆ ಆಗಮಿಸಿದ್ದಾರೆ. ಎಲ್ಲರೂ ನೇತ್ರಾವತಿ ಸ್ನಾನಘಟ್ಟದಲ್ಲಿ ಬೀಡುಬಿಟ್ಟಿದ್ದಾರೆ. ದೂರು ನೀಡಿದ ಅನಾಮಧೇಯ ವ್ಯಕ್ತಿ ಈವರೆಗೆ ಶವಗಳನ್ನು ಹೂತಿರುವ 13ಸ್ಥಳಗಳನ್ನು ತೋರಿಸಿದ್ದಾನೆ.ಇಂದು ಸಂಜೆಯೊಳಗೆ ಅಸ್ಥಿಪಂಜರಗಳು ಹೊರಬರಲಿವೆಯೇ ಎಂದು ಕಾದುನೋಡಬೇಕಿದೆ.

ಈ ಮಧ್ಯೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಪರಮೇಶ್ವರ್, ಧರ್ಮಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ಪೊಲೀಸರು ಕಳೇಬರ ಅಥವಾ ಅಸ್ಥಿಪಂಜರಗಳ ಸಂಗ್ರಹಕ್ಕಾಗಿ ಬಟ್ಟೆ, ಪ್ಲಾಸ್ಟಿಕ್‌ ಕವರ್‌ಗಳನ್ನು ತಂದಿದ್ದಾರೆ. ದೂರುದಾರ ವ್ಯಕ್ತಿ ಶನಿವಾರ ಮತ್ತು ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಜುಲೈ 4ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

ಇದನ್ನೂ ಓದಿ:ಬಿಜೆಪಿ ಬಂದು 11ವರ್ಷ ಆಯ್ತು, ಹಿಂದುಗಳಿಗೆ ಏನು ಮಾಡಿದೆ? : ಸಂತೋಷ‌ ಲಾಡ್