ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ನಾಗರಹಾವು ಇಲಿ, ಕೋಳಿ ಮೊಟ್ಟೆ ಹಾಗೆಯೇ ಹಾವುಗಳನ್ನೂ ನುಂಗಿರುವ ಉದಾಹರಣೆ ಇದೆ. ಆದರೆ ತನ್ನ ಆಹಾರ ಎಂದು ಭ್ರಮಿಸಿ ಚಾಕುವನ್ನು ನುಂಗಿ ನಂತರ ಅದು ಜೀರ್ಣವಾಗದೆ ಹೊರಕ್ಕೂ ಹಾಕಲಾರದೆ ವಿಲವಿಲ ಒದ್ದಾಡಿದ ಘಟನೆ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕರ ಮನೆಯಲ್ಲಿ ನಡೆದಿದೆ.

ಗೋವಿಂದ ನಾಯ್ಕರ ಅಡುಗೆ ಮನೆಯ ಗೋಡೆಯಲ್ಲಿದ್ದ ಚಾಕು ಹೊರಕ್ಕೆ ಬಿದ್ದಿದ್ದು ಅಲ್ಲಿ ಹಾವು ಓಡಾಡುತ್ತಿದ್ದರಿಂದ ಹೊರಕ್ಕೆ ಹೋಗಲು ಹೆದರಿದ್ದರು. ಕೆಲ ಹೊತ್ತಲ್ಲೇ ಚಾಕು ಕಣ್ಮರೆಯಾಯಿತು. ಅಲ್ಲೇ ಹಾವು ಕೂಡ ಏನೋ ತಿಂದು ವಿಶ್ರಾಂತ ಸ್ಥಿತಿಯಲ್ಲಿದ್ದು, ಹಾವು ಹೋಗಲಿ ಎಂದು ಕೆಲ ಹೊತ್ತು ಸಮಯ ನೀಡಿದ್ದರೂ ಹಾವು ಹೋಗಲಿಲ್ಲ. ಚಾಕು ಇಲ್ಲದಿದ್ದದ್ದನ್ನು ನೋಡಿ ಅನುಮಾನಿಸಿ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಬಂದ ಸರಿಸೃಪ ತಜ್ಞ ಹಾವನ್ನು ಪರಿಶೀಲಿಸಿ ಅದು ಚಾಕು ನುಂಗಿದೆ ಹಾಗೂ ಚಾಕುವಿನ ತುದಿ ಎದೆಯ ಹತ್ತಿರ ಸಿಲುಕಿದ್ದು ಹೊರಹಾಕಲು ಒದ್ದಾಡುತ್ತಿದೆ. ಹೇಗಾದರೂ ಮಾಡಿ ಚಾಕು ಹೊರತೆಗೆಯದಿದ್ದರೆ ಹಾವಿನ ಜೀವಕ್ಕೆ ಅಪಾಯ ಎಂದು ಅರಿತ ಪವನ್ ಅವರು ಪಶು ಆಸ್ಪತ್ರೆಯ ಸಹಾಯಕರಾದ ಅದ್ವೈತ ಭಟ್ ಅವರ ಮನೆಗೆ ಹೋಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಮೂಲಕ ಚಾಕುವನ್ನು ನಾಗರಹಾವಿನ ಹೊಟ್ಟೆಯಿಂದ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ನಂತರ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಿದ್ದಾರೆ. ಪವನ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ