ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಶಿರಸಿ ಗಡಿಭಾಗಕ್ಕೆ ಹೊಂದಿಕೊಂಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮ ಇನ್ನೂ 21ನೇ ಶತಮಾನಕ್ಕೆ ಕಾಲಿರಿಸಿಲ್ಲ. ಆ ಊರಿನ ಜನ ಸರ್ಕಾರದಿಂದ ಸಿಗುವ ಅಕ್ಕಿಪಡೆಯಲು 8ಕಿಮೀ ನಡೆಯುತ್ತಾರೆ. ಈಗಲೂ ಅನಾರೋಗ್ಯಕ್ಕೆ ಒಳಗಾದವರನ್ನು ಕಂಬಳಿ ಮೇಲೆ ಹೊತ್ತು ಆಸ್ಪತ್ರೆಗೆ ತರುತ್ತಾರೆ..!

ಶಿರಸಿಯಿಂದ 45 ಕಿಮೀ ದೂರದಲ್ಲಿ ಶಿರಗುಣಿ ಎಂಬ ಊರಿದೆ. ಈ ಊರಿಗೆ ಕನಿಷ್ಟ ಸೌಕರ್ಯ ಒದಗಿಸಲು ಸರ್ಕಾರ ವಿಫಲವಾಗಿದೆ. ಮಳೆಗಾಲದಲ್ಲಿ ಇಲ್ಲಿನ ಜನ ನರಕದ ಜೀವನ ನಡೆಸುತ್ತಾರೆ. ಸಾಕಷ್ಟು ಬಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಊರಿನವರ ಉಪಯೋಗಕ್ಕಾಗಿ ಒಂದು ರಸ್ತೆ ಸಹ ಇಲ್ಲಿ ನಿರ್ಮಿಸಲು ಆಗಿಲ್ಲ!

ಮಳೆಗಾಲದ ಸಮಸ್ಯೆ ಬಗ್ಗೆ ಅಕ್ಟೊಬರ್ ತಿಂಗಳಿನಲ್ಲಿ ಶಾಸಕರ ಗಮನಕ್ಕೆ ತರಲಾಗಿದೆ. ಅದರಿಂದ ಯಾವ ಪ್ರಯೋಜನವೂ ಆಗಿಲ್ಲ ಎಂಬುದು ಊರಿನವರ ಅಳಲು. ತಹಶೀಲ್ದಾರ್ ಒಮ್ಮೆ ಊರಿಗೆ ಬಂದಿದ್ದರು. ಸಾಕಷ್ಟು ಭರವಸೆಗಳನ್ನು ಕೊಟ್ಟರು. ಆದರೆ, ಅದ್ಯಾವುದು ಈಡೇರಿಲ್ಲ' ಎಂಬುದು ಅಲ್ಲಿನವರ ನೋವು.ಮಹಿಳೆಯರಿಗೆ ಸರ್ಕಾರ ಶಕ್ತಿ ಭಾಗ್ಯ ಕೊಟ್ಟಿದೆ. ಆದರೆ, ನಮ್ಮೂರಿಗೆ ಬಸ್ಸೇ ಬರುವುದಿಲ್ಲ. ಬಸ್ಸು ಬರಲು ರಸ್ತೆಯೇ ಇಲ್ಲ. ಉಚಿತವಾಗಿ ಅಕ್ಕಿ ಕೊಡ್ತೇವೆ ಅಂತಾರೆ. ಆದರೆ ಅದನ್ನು ಮನೆಗೆ ತರುವ ಖರ್ಚು, ಅಕ್ಕಿಯ ಮಾರುಕಟ್ಟೆ ದರಕ್ಕಿಂತಲೂ ಜಾಸ್ತಿಯಾಗುತ್ತದೆ. ಶಾಲೆಗೆ ಕೊಡುವ ಮೊಟ್ಟೆಗಳು ಹಾಳಾದ ರಸ್ತೆಯಲ್ಲಿ ತರುವಾಗಲೇ ಒಡೆದುಹೋಗುತ್ತಿದೆ. ಇನ್ನೆಲ್ಲಿ ಮಕ್ಕಳಿಗೆ ಮೊಟ್ಟೆ ಭಾಗ್ಯ?’ ಎಂದು ವಾನಳ್ಳಿ ಗ್ರಾಪಂ ಸದಸ್ಯ ಉಮೇಶ ಭಟ್ಟ ಪ್ರಶ್ನಿಸಿದ್ದಾರೆ.

ಈ ರಸ್ತೆಯಲ್ಲಿ ಪ್ರತಿದಿನ ನಮ್ಮಮಕ್ಕಳನ್ನು ಶಾಲೆಗೆ ಕಳಿಸಲು ಹೆದರಿಕೆಯಾಗುತ್ತದೆ.ರಸ್ತೆಯ ಅವವ್ಯಸ್ಥೆಯನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ'ಎಂದು ಅಲ್ಲಿನ ಅಣ್ಣೇಗೌಡ ಹೇಳುತ್ತಾರೆ.ಸಿದ್ದಿ ಸಮುದಾಯದ 20ಕ್ಕೂ ಅಧಿಕ ಜನರು ಈ ಊರಿನಲ್ಲಿದ್ದಾರೆ. ಅದಾಗಿಯೂ ಎಸ್ಟಿ ಅನುದಾನದ ಅಡಿ ಅಭಿವೃದ್ಧಿ ಆಗಿಲ್ಲ’ ಎಂಬುದು ಬುಡಕಟ್ಟು ಜನರ ದೂರು. ಈ ಊರಿನ ಜನ ಹೈನುಗಾರಿಕೆ ಮಾಡಿ ಉಪಜೀವನ ನಡೆಸುತ್ತಿದ್ದು, ನಿತ್ಯ 60ಲೀಟರ್ ಹಾಲು ಡೇರಿಗೆ ಸಂಗ್ರಹವಾಗುತ್ತಿತ್ತು. ಆದರೆ, ಡೇರಿಗೆ ಹೋಗಿ ಬರಲು ರಸ್ತೆ ಇಲ್ಲದ ಕಾರಣ ಜನ ಹಸು ಮಾರಾಟ ಮಾಡಿದ್ದಾರೆ.

ಶಿರಸಿ ತಾಲೂಕಿನ ಮತ್ತೀಘಟ್ಟ ಹಾಗೂ ನಿಲೇಕಣಿ ರಸ್ತೆ ಸಮಸ್ಯೆಯನ್ನು ಹೋರಾಟದ ಮೂಲಕ ಮಾಡಿಸಿದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಇದೀಗ ಶಿರಗಣಿ ಜನರ ಬೆಂಬಲಕ್ಕೆ ನಿಂತಿದ್ದಾರೆ. ಜೂ 15ರ ಒಳಗೆ ಸುಗಮ ರಸ್ತೆ ಸಂಚಾರ ವ್ಯವಸ್ಥೆ ಆಗದೇ ಇದ್ದರೆ ಶಾಸಕರ ಕಚೇರಿ ಎದುರು ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಗ್ರಾಮದ ಜನ ಸಹ ತಾವು ಈ ಧರಣಿಯಲ್ಲಿ ಭಾಗವಹಿಸುವುದಾಗಿ ವಾಗ್ದಾನ ಮಾಡಿದ್ದಾರೆ.

ಇದನ್ನೂ ಓದಿ