ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಡಾ ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನ ನಮ್ಮ ದೇಶ “ಸರ್ವ ಜನಾಂಗದ ಶಾಂತಿಯ ತೋಟ”ಆಗಬೇಕಾಗಿರುವ ಈ ಸಂದರ್ಭದಲ್ಲಿ ಅವೈಜ್ಞಾನಿಕವಾಗಿರುವ ಜಾತಿಗಣತಿಯನ್ನು ಮುನ್ನಲೆಗೆ ತಂದು,ಜಾತಿ ಜಾತಿಗಳ ಮಧ್ಯೆ ಸಂಘರ್ಷದ ವಾತಾವರಣ ನಿರ್ಮಿಸಿರುವ ಕಾಂಗ್ರೆಸ್ ಸರಕಾರ, ಭವಿಷ್ಯದಲ್ಲಿ ಉನ್ನತ ಕನಸನ್ನು ಕಾಣುವ ಮುಗ್ಧ ಹುಡುಗರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಜನಿವಾರ ಕತ್ತರಿಯ ಪ್ರಯೋಗ ಖಂಡನೀಯವಾದದ್ದು ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾದ ಈಶ್ವರ ನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸಂವಿಧಾನ, ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿ, ಸರ್ವರಿಗೆ ಸಮಬಾಳು ಕಲ್ಪಿಸಿರುವುದು ಆರೋಗ್ಯಯುತ ಸಮಾಜದ ಕಲ್ಪನೆಗೆ ಮಾದರಿಯಾಗಿದೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹತ್ತಾರು ವರ್ಷಗಳ ಹಿಂದೆ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಮಾಡಿದ ಅವೈಜ್ಞಾನಿಕ ಜಾತಿಗಣತಿಯನ್ನು ಕ್ಯಾಬಿನೆಟ್ ನಲ್ಲಿ ಅಂಗೀಕರಿಸಲು ಪ್ರಯತ್ನಿಸುತ್ತಿರುವುದು, ಹಲವು ಸಮುದಾಯಗಳ ಆಂತರಿಕ ಕ್ಷೋಭೆಗೆ ಕಾರಣವಾಗಿದೆ.

ಸಮೀಕ್ಷೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸರ್ವರನ್ನು ವಿಶ್ವಾಸಕ್ಕೆ ಪಡೆದು, ಪ್ರಜಾ ಪ್ರಭುತ್ವದ ಮಾದರಿಯಲ್ಲಿ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಜನರನ್ನು ಹಿಂಸಿಸುವ, ಜಾತಿ ಜಾತಿಗಳ ಮಧ್ಯೆ ಸಂಘರ್ಷವನ್ನು ಉಂಟುಮಾಡುವ ಮತ್ತು ಒಂದು ಧರ್ಮವನ್ನು ವಿಜ್ರಂಭಿಸುವ ಪ್ರಸ್ತುತ ಜಾತಿಗಣತಿ ಸಮೀಕ್ಷೆಯನ್ನು ವಾಪಸ್ ಪಡೆದು, ಜನರಲ್ಲಿ ಶಾಂತಿ ಸಮಾಧಾನವನ್ನು ತರುವ ಕೆಲಸವನ್ನು ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ.

ಈ ಮಧ್ಯದಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಧಾರ್ಮಿಕ ಪ್ರಜ್ಞೆಯನ್ನ ಧಿಕ್ಕರಿಸಿ, ಜನಿವಾರವನ್ನು ತುಂಡರಿಸಿ ಪರೀಕ್ಷೆ ಬರೆಯಲು ತಾಕೀತು ಮಾಡಿರುವುದು ಖಂಡನೀಯ.ಶನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿರುವ ಘಟನೆ ಒಂದು ಕೇಂದ್ರದಲ್ಲಿ ಘಟಿಸಿದ್ದರೆ, ಸಿಬ್ಬಂದಿಯ ಅಲಕ್ಷತನ ಎಂದು ಭಾವಿಸ ಬಹುದಿತ್ತು. ಆದರೆ ಈ ಘಟನೆ ರಾಜ್ಯದ ಹಲವು ಜಿಲ್ಲೆಗಳ ಹಲವು ಸಿಇಟಿ ಕೇಂದ್ರದಲ್ಲಿ ಆಗಿರುವುದನ್ನು ಗಮನಿಸಿದಾಗ ಈ ಷಡ್ಯಂತ್ರದ ಹಿಂದೆ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಪಾತ್ರ ಇರುವುದು ಗಮನಕ್ಕೆ ಬರುತ್ತಿದೆ.

ಭವಿಷ್ಯದಲ್ಲಿ ಉನ್ನತ ಕನಸನ್ನು ಹೊತ್ತು ಪರೀಕ್ಷಾ ಒತ್ತಡದಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ರೀತಿಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಂಡು, ಮಾನಸಿಕವಾಗಿ ಘಾಸಿಗೊಳಿಸುವ ಈ ಪ್ರಕ್ರಿಯೆ ಹಲವಾರು ಸಿಇಟಿ ಕೇಂದ್ರದಲ್ಲಿ ಆಗಿರುವುದನ್ನು ಉನ್ನತ ತನಿಖೆ ನಡೆಸಿ, ಈ ಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳನ್ನು ಶಿಕ್ಷಿಸಬೇಕೆಂದು ತನ್ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಆಗದಂತೆ ಸರ್ಕಾರ ನಿರ್ದಿಷ್ಟ ಆದೇಶಗಳ ಮೂಲಕ ವ್ಯವಸ್ಥೆ ಮಾಡಬೇಕು ಎಂದು ಬಿಜೆಪಿ ಹಿಂದುಳಿದ ಮೋರ್ಚ ಬಯಸುತ್ತದೆ ಎಂದು ಶ್ರೀ ಈಶ್ವರ ನಾಯ್ಕ ತಿಳಿಸಿದರು.

ಅಂತೆಯೇ ಸಿಇಟಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ, ಈ ಕೂಡಲೇ ಸಿಇಟಿ ಬರೆಯಲು ಅವಕಾಶ ಮಾಡಿಕೊಡಬೇಕು ಅಥವಾ ಉಳಿದ ಪರೀಕ್ಷೆಗಳ ಆಧಾರದ ಮೇಲೆ ಸಿಇಟಿ ರ್‍ಯಾಂಕ್ ನೀಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ