ಸುದ್ದಿಬಿಂದು ಬ್ಯೂರೋ ವರದಿ
Karwar:ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನ ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸ್ ಕೊನೆಗೂ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿಯೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಗೋ ಹತ್ಯೆ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಎಸ್ಪಿ ಎಂ ನಾರಾಯಣ ಟೀಂ ಯಶಸ್ವಿಯಾಗಿದೆ.
ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ನಡೆದಿದ್ದ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಪ್ರಕರಣದ ಆರೋಪಿಗಳನ್ನ ಬಂಧಿಸುವಂತೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಇನ್ನು ಪ್ರಕರಣದ ಹಿಂದೆ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಆರೋಪಿಗಳನ್ನ ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಜನವರಿ 19ರಂದು ಕೊಂಡಕುಳಿ ಗ್ರಾಮದಲ್ಲಿ ಮೇಯಲು ಹೋಗಿದ್ದ ಹಸುವನ್ನ ಕಡಿದ ಆರೋಪಿಗಳು ಗೋ ಮಾಂಸವನ್ನ ಭಟ್ಕಳದಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ನೀಡಿದ್ದರು. ಸುಮಾರು 400ಕ್ಕೂ ಅಧಿಕ ಜನರನ್ನ ಪೊಲೀಸರು ವಿಚಾರಣೆ ನಡೆಸಿ ಹಸುವನ್ನ ಕೊಂದವರು ಗುರುತಿಸಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಡು ಬೀಸಿದ್ದರು. ಆರೋಪಿಗಳನ್ನ ಹುಡುಕಿಕೊಟ್ಟವರಿಗೆ ಬಹುಮಾನವನ್ನ ಸಹ ಕೊಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಅಂತಿಮವಾಗಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ವಾಸೀಂ ಎಂಬಾತನನ್ನ ಮುಂಬೈನಲ್ಲಿ ಹಾಗೂ ಇನ್ನೋರ್ವ ಆರೋಪಿ ಮುಜಾಮಿಲ್ ಎನ್ನುವಾತನನ್ನ ಭಟ್ಕಳದಲ್ಲಿ ಬಂಧಿಸಲಾಗಿದೆ.
ಪ್ರಕರಣಕ್ಕೆ ಸಹಕಾರ ಕೊಟ್ಟಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂದಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಫೈಜಾನ್ ಎನ್ನುವ ಆರೋಪಿ ಕಾಲಿಗೆ ಪೊಲೀಸರು ಗುಂಡನ್ನ ಸಹ ಹಾರಿಸಿದ್ದರು. ಇದಾದ ನಂತರ ವಾಸೀಂ ಹಾಗೂ ಮುಜಾಮಿಲ್ ಇಬ್ಬರು ಧಾರವಾಡಕ್ಕೆ ತೆರಳಿ ಅಲ್ಲಿಂದ ಮುಂಬೈ ಕಡೆ ಹೋಗಿ ತಪ್ಪಿಸಿಕೊಂಡಿದ್ದರು.ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಜಿಲ್ಲಾ ಪೊಲೀಸರ ವಿಶೇಷ ತಂಡವನ್ನ ಸಹ ರಚಿಸಿದ್ದರು. ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿ ಹಲವರನ್ನ ವಿಚಾರಿಸಿ ವಾಸೀಂ ನನ್ನ ಬಂದಿಸಿದ್ದಾರೆ. ಅಲ್ಲದೇ ಮುಜಾಮಿಲ್ ಆರ್ಥಿಕ ಸಮಸ್ಯೆ ಉಂಟಾಗಿ ವಾಪಾಸ್ ತನ್ನೂರು ಭಟ್ಕಳದತ್ತ ಬಂದಿರುವ ಮಾಹಿತಿ ತಿಳಿದು ಆತನನ್ನ ಸಹ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಗೋ ಹತ್ಯೆ ಪ್ರಕರಣ ಭೇದಿಸುವಲ್ಲಿ ಕೊನೆಗೂ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ