ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕಾಂಡ್ಲಾ ವನಗಳು ಜೈವಿಕ ವ್ಯವಸ್ಥೆಯ ಹಾಟ್‌ಸ್ಪಾಟ್ ಅಲ್ಲದೇ ಜನರ ಬದುಕನ್ನು ಕಟ್ಟುವ ಕೇಂದ್ರಗಳೂ ಆಗಿವೆ ಎಂದು ಹೊನ್ನಾವರ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಯೋಗೀಶ ಸಿ.ಕೆ. ರವರು ಹೇಳಿದರು.

ಆಸ್ಟರ್ ಡಿ.ಎಮ್. ಫೌಂಡೇಶನ್, ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕುಮಟಾದ ಬರ್ಗಿ ಗ್ರಾಮ‌ ಪಂಚಾಯತ ವ್ಯಾಪ್ತಿಯ ಕಿಮಾನಿ ಬಳಿ ಅಘನಾಶಿನಿ ನದಿಯ ದಡದಲ್ಲಿ ನಡೆದ ಅಘನಾಶಿನಿ ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ವೃಕ್ಷ ಪೂಜೆ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕಾಂಡ್ಲಾ ವನಗಳು ಸಮೃದ್ಧ ಜೀವ ವೈವಿಧ್ಯತೆಯ ಕೇಂದ್ರವಾಗುವ ಜೊತೆಯಲ್ಲಿ ಕಡಲ್ಕೊರೆತ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಕೃತಿ ವಿಕೋಪ, ಪ್ರವಾಹದ ಸಂದರ್ಭದಲ್ಲಿ ಉಂಟಾಗಬಹುದಾದ ಅಪಾಯವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈಗಾಗಲೇ ಯುನೆಸ್ಕೋ ಅಧ್ಯಯನದ ಪ್ರಕಾರ ಜಿಲ್ಲೆಯಲ್ಲಿ 2156.63 ಹೆಕ್ಟೇರ್ ಕಾಂಡ್ಲಾ ಪ್ರದೇಶವಿದ್ದು, ಕೆಲವು ಕಾಂಡ್ಲಾ ವನಗಳನ್ನು ಅಭಿವೃದ್ಧಿಪಡಿಸುವುದರಿಂದ ಮೀನುಗಾರಿಕೆ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ಥಳೀಯ ಜನರಿಗೂ ವಿವಿಧ ರೀತಿಯ ಆದಾಯದ ಮೂಲವಾಗುತ್ತದೆ.

ಸ್ಕೊಡ್‌ವೆಸ್‌ನಂತಹ ಸಂಘ-ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿದರೆ ಕಾಂಡ್ಲಾ ಸಂರಕ್ಷಣಾ ಕಾರ್ಯಕ್ರಮವನ್ನೂ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಸಾಧ್ಯ ಎಂದರು.

ಅಭಿಯಾನದ ಮುಖ್ಯಸ್ಥ ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ ಕಳೆದ ಮಳೆಗಾಲದಲ್ಲಿ ಜಿಲ್ಲೆಯಲ್ಲಾದ ಹಲವಾರು ಪ್ರಕೃತಿ ವಿಕೋಪ ಸಂಗತಿಗಳು, ನದಿಯಂಚಿನಲ್ಲಿ ಉಂಟಾದ ಅನಾಹುತಗಳು ಕಡಲ ಜೀವ ವೈವಿಧ್ಯತೆಯ ವ್ಯವಸ್ಥೆಯಲ್ಲಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಘನಾಶಿನಿ ಕಾಂಡ್ಲಾ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿರುತ್ತೇವೆ.

ಈ ಅಭಿಯಾನವು ಪ್ರಥಮ ಹಂತದಲ್ಲಿ ಕಾರವಾರದಿಂದ ಭಟ್ಕಳದವರೆಗಿನ ಸಮುದ್ರ ತೀರದ ನದಿ ಪ್ರದೇಶಗಳಲ್ಲಿ ನಡೆಯಲಿದ್ದು ಕಾಂಡ್ಲಾ ನಾಟಿ, ನೆಡುತೋಪು ಸಂರಕ್ಷಣೆ, ಜನ ಜಾಗೃತಿ ನದಿ ತೀರ ಪ್ರದೇಶಗಳ ಜನರಿಗೆ ವಿವಿಧ ಹಂತದ ಕೌಶಲ್ಯ ತರಬೇತಿ,ಪರಿಸರ ಪ್ರವಾಸೋದ್ಯಮ, ಜೇನು ಸಾಕಾಣಿಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದ್ದು ಸಾರ್ವಜನಿಕರು ಸಂಘ-ಸಂಸ್ಥೆಗಳು ಜನ ಪ್ರತಿನಿಧಿಗಳು ಈ ಕಾರ್ಯಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಅಭಿಯಾನದ ಚಾಲನಾ ಕಾರ್ಯಕ್ರಮದಲ್ಲಿ ಹಿರೇಗುತ್ತಿ ವಲಯ ಅರಣ್ಯ ಅಧಿಕಾರಿ ರಾಜು ನಾಯ್ಕ ಹಾಗೂ ಸಿಬ್ಬಂದಿಗಳು, ಸ್ಕೊಡ್‌ವೆಸ್ ಸಂಸ್ಥೆಯ ಸಹೋದ್ಯೋಗಿಗಳು, ಸ್ಥಳೀಯ ಸ್ವಯಂ ಸೇವಕರು ಉಪಸ್ಥಿತರಿದ್ದು, ಇದೇ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಕಾಂಡ್ಲಾ ಸಸಿಗಳನ್ನು ಸ್ಥಳೀಯರ ಸಹಕಾರದೊಂದಿಗೆ ನಾಟಿ ಮಾಡಲಾಯಿತು.

ಆರಂಭದಲ್ಲಿ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಭಿಯಾನದ ಸಂಯೋಜಕಿ ಕು. ಶೋಭಾ ಎಸ್.ಜಿ. ಇವರು ಎಲ್ಲರನ್ನೂ ವಂದಿಸಿದರು.

ಇದನ್ನೂ ಓದಿ