ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಇಲ್ಲಿನ ಪಂಡಿತ್ ಆಸ್ಪತ್ರೆ ವಿಚಾರದಲ್ಲಿ ಸ್ಥಳೀಯ ಶಾಸಕರು ಹೇಳಿರುವ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾಗಿದೆ.ಶಾಸಕರ ಹೇಳಿಕೆ ಸುಳ್ಳು ಎನ್ನುವುದನ್ನ ನಾನು ಹೇಳುತ್ತಿಲ್ಲ,ದಾಖಲೆಗಳೇ ಹೇಳುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಶಿರಸಿಯ ಪಂಡಿತ್ ಸಾರ್ವಜನಿಕ ಅಸ್ಪತ್ರೆ ವಿಷಯಕ್ಕೆ ಸಂಬಂಧಿಸಿ ಎಲ್ಲ ದಾಖಲಾತಿಗಳನ್ನು RTI ಮೂಲಕ ತೆಗೆದುಕೊಳ್ಳಲಾಗಿದೆ. MRI ಮತ್ತು CT ಸ್ಕ್ಯಾನ್ ಮಷಿನ್, ಟ್ರಾಮಾ ಸೆಂಟರ್, ಹಾರ್ಟ್ ಅಪರೇಷನ್ ಮಾಡುವ ಸಾಮಗ್ರಿಗಳನ್ನು ಒಳಗೊಂಡು, ವೈದ್ಯಕೀಯ ಉಪಕರಣಗಳನ್ನು ಯಾವ ರೀತಿ ಈ ಕಾಂಗ್ರೆಸ್ ಸರಕಾರ ಮತ್ತು ಶಾಸಕರು ಮಾಯ ಮಾಡಿದ್ದಾರೆ ಎನ್ನುವ ರೋಚಕ ಸತ್ಯ ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಅವರು ಹೇಳಿದರು.
ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆ ಎಂದು ತೀರ್ಮಾನ ಮಾಡಿ 6 ಕೋಟಿ ಹಣಕ್ಕಿಂತ ಜಾಸ್ತಿ ಅನುದಾನ ಸಾಧ್ಯವಿಲ್ಲ ಎಂದು ಸರಕಾರ ಸಾರಾ ಸಗಟಾಗಿ ತಿರಸ್ಕಾರ ಮಾಡಿದ ಮೇಲೆ ಅಸ್ಪತ್ರೆಯ ರೂಪವನ್ನೇ ಕೆಡಿಸಲು ಪ್ರಯತ್ನಿಸಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಬಳಿಗೆ ಹೋಗಿ ದಾಖಲೆಗಳನ್ನು ನೀಡಿ, ಹಿಂದಿನ ಸರಕಾರದಲ್ಲಿ ಯಾವ ರೀತಿಯಲ್ಲಿ ಆಸ್ಪತ್ರೆ ಮಾಡಬೇಕಾಗಿತ್ತೋ ಅದೇ ರೀತಿ ಮಾಡುವ, ಎಲ್ಲ ಸಾಮಗ್ರಿ ತರುವ ಖಾತ್ರಿ ಪಡಿಸಿ
ಆ ಮೂಲಕ ಕ್ಷೇತ್ರದ ಜನರ ವಿಶ್ವಾಸ ಶಾಸಕರು ಉಳಿಸಿಕೊಳ್ಳಲಿ. ಅವರ ಮೇಲಿನ ಗೌರವ ಮತ್ತು ವಿಶ್ವಾಸದ ಕಾರಣಕ್ಕೆ ಫೆ.20ರ ವರೆಗೆ ನಾವೆಲ್ಲರೂ ಕಾಯುತ್ತೇವೆ.
ಆಗಲೂ ಸಹ ಅವರು ಇದೇ ಈ ರೀತಿಯ ಮೌನ ವಹಿಸಿದರೆ, ನಾವು ಜನರ ಬಳಿಗೆ ಹೋಗಿ, ಶಾಸಕರ ನಡೆಯನ್ನು, ಅವರ ಮೌನ ಅಭಿವೃದ್ಧಿ ವಿಚಾರವನ್ನು ತಿಳಿಸುವುದು ಅನಿವಾರ್ಯವಾಗಿರುತ್ತದೆ. ಈ ವಿಚಾರವಾಗಿ ದೊಡ್ಡ ಮಟ್ಟದ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿರುತ್ತೇವೆ ಮತ್ತು ಫೆ.20 ರ ನಂತರ ನಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನವನ್ನು ತಿಳಿಸುತ್ತೇವೆ. ಬೀದಿ ಬೀದಿಯಲ್ಲಿ ಆಸ್ಪತ್ರೆ ಉಳಿಸಿ ಅಭಿಯಾನ ಪ್ರಾರಂಭಿಸುವುದು ಅನಿವಾರ್ಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ನಾಗರಾಜ ನಾಯ್ಕ, ಶಿವಾನಂದ ದೇಶಳ್ಳಿ, ಪ್ರೇಮಕುಮಾರ್ ನಾಯ್ಕ, ರಂಗಪ್ಪ ದಾಸನಕೊಪ್ಪ ಇನ್ನಿತರರು ಇದ್ದರು.
ಇದನ್ನೂ ಓದಿ